ಯಲಬುರ್ಗಾ: ಕೊರೊನಾ ವೈರಸ್ ಹರಡುವಿಕೆಯ ನಿಯಂತ್ರಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಭಾನುವಾರ ಯಲಬುರ್ಗಾ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಉತ್ತಮ ಬೆಂಬಲ
ವ್ಯಕ್ತವಾಗಿದೆ.
ಬೆಳಿಗ್ಗಿಯಿಂದಲೇ ಯಾವುದೇ ಖಾಸಗಿ ಅಥವಾ ಸರ್ಕಾರಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಲ್ಲದೆ, ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಿ ವ್ಯಾಪಾರ ವಹಿವಾಟುವಾಗಲಿ ನಡೆಯದೇ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರಿಗೆ ಸಂಸ್ಥೆಯ ಬಸ್ಗಳು ಕೂಡಾ ಸಂಚಾರವನ್ನು ರದ್ದು ಪಡಿಸಿದ್ದರ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿಯೂ ಕೂಡ ಖಾಲಿ ಖಾಲಿಯಾಗಿಯೇ ಇತ್ತು.
ಕೆಲ ದಿನಗಳ ಮುಂಚಿತವಾಗಿಯೇ ಜನತಾ ಕರ್ಫ್ಯೂ ಇರುವುದಾಗಿ ಘೋಷಣೆಯಾಗಿದ್ದಲ್ಲದೆ ಗ್ರಾಮೀಣ ಪ್ರದೇಶದಲ್ಲಿಯೂ ವ್ಯಾಪಕ ಪ್ರಚಾರ ಕೈಗೊಂಡಿದ್ದರಿಂದ ಹಳ್ಳಿಗಳ ಜನರು ಕೂಡಾ ಉತ್ತಮ ಸ್ಪಂದನೆ ದೊರೆತಿದೆ.
ಮುಧೋಳ, ಸಂಗನಾಳ, ಹಿರೇವಂಕಲಕುಂಟಾ, ವಜ್ರಬಂಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಜನರು ಹೊರಬರದೇ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಹಾಗೆಯೇ ಗುನ್ನಾಳ ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳು ಹಾಗೂ ಕುಡಗುಂಟಿ ಗ್ರಾಮ ಸೇರಿ ಅನೇಕ ಕಡೆ ಡಂಗುರ ಸಾರಿ ಮನೆಯಿಂದ ಹೊರಬರದಂತೆ ಎಚ್ಚರ ವಹಿಸಿದ್ದು ಕಂಡು ಬಂದಿದೆ. ಇದರಿಂದ ಕೊರೊನಾ ವೈರಸ್ ಹರಡದಂತೆ ಕೈಗೊಂಡ ಮುಂಜಾಗ್ರತಾ ಕ್ರಮಕ್ಕೆ ಜನತೆ ಪ್ರೋತ್ಸಾಹಿಸಿದ್ದು ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಪೊಲೀಸ್ ಇಲಾಖೆ ಅಧಿಕಾರಿಗಳು ಕೂಡಾ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಸುತ್ತಾಡಿ ಜನತಾ ಕರ್ಫ್ಯೂ ಯಶಸ್ಸಿಗೊಳ್ಳುವಂತೆ ನೋಡಿಕೊಂಡರು. ಕಳೆದ ಎರಡು ದಿನಗಳ ಮುಂಚಿತವಾಗಿಯೇ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆಯ ವತಿಯಿಂದ ಮೋದಿಯವರ ಕರೆಗೆ ಬೆಂಬಲಿಸುವಂತೆ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿದ್ದರು.
ಚಪ್ಪಾಳೆ: ಜನರಿಗಾಗಿ ಜನರಿಗೊಸ್ಕರವಾಗಿ ದೇಶದಾದ್ಯಂತ ಹಮ್ಮಿಕೊಂಡಿದ್ದ ಜನತಾ ಕರ್ಫ್ಯೂ ಮುಕ್ತಾಯದ ಹೊತ್ತಿನಲ್ಲಿ ಸರಿಯಾಗಿ 5 ಗಂಟೆಗೆ ಪಟ್ಟಣದ ಬಿಜೆಪಿ ಮುಖಂಡರು, ಸಾರ್ವಜನಿಕರು ಚಪ್ಪಾಳೆ ತಟ್ಟಿ
ಸಂಭ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.