ಕೊಪ್ಪಳ: ಜಗತ್ತಿನಲ್ಲಿ ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ ಎಂದು ಡಾ.ಗವಿ ಪಾಟೀಲ ಹೇಳಿದರು.
ತಾಲ್ಲೂಕಿನ ಹಲಗೇರಿ ಗ್ರಾಮದ ದ್ಯಾಮಮ್ಮ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಶಾಂಭವಿ ಸೇವಾ ಸಮಿತಿ, ಗ್ರಾಮ ಪಂಚಾಯಿತಿ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಲ್ಕು ದಶಕದ ಬಳಿಕ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ. ಜೀವ ಹೋದ ಮೇಲೆ ಜೀವ ರಕ್ಷಿಸಲು ಆಗುವುದಿಲ್ಲ. ಆದ್ದರಿಂದ ರಕ್ತದಾನ ಮಾಡಿ ಮನುಷ್ಯನ ಜೀವ ಉಳಿಸಿ ಎಂದರು.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ರಕ್ತದ ಬೇಡಿಕೆ ಹೆಚ್ಚುತ್ತಿದ್ದು, ರಕ್ತದ ಕೊರತೆಯಿಂದ ಸಾವಿರಕ್ಕೆ ಒಬ್ಬರು ಮೃತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ನಗರದಲ್ಲಿಯೇ ರಕ್ತನಿಧಿ ಶಾಖೆ ಸ್ಥಾಪಿಸಿದ್ದು, ಈ ಭಾಗದ ಜನರಿಗೆ ತುಂಬಾ ಉಪಯುಕ್ತವಾಗಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ಪ ಓಜನಹಳ್ಳಿ ಮಾತನಾಡಿ, ’ಗ್ರಾಮದ ಎಲ್ಲ ಯುವಕರು ರಕ್ತದಾನ ಮಾಡಲು ಉತ್ಸುಕರಾಗಿದ್ದು, ಈ ಶಿಬಿರದ ಪ್ರೇರಣೆಯಿಂದ ನಾನೇ ಮೊದಲು ರಕ್ತದಾನ ಮಾಡುತ್ತೇನೆ‘ ಎಂದು ಯುವಕರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಿದರು.
ಪಿಡಿಒ ಅಶೋಕ ರಾಂಪುರ ಮಾತನಾಡಿದರು.
ಉಪಾಧ್ಯಕ್ಷೆ ಸರ್ವಮಂಗಳ ಹಿರೇಮಠ, ಸಮಿತಿ ಅಧ್ಯಕ್ಷ ಗುರುನಗೌಡ ಪಾಟೀಲ, ಗವಿಸಿದ್ದನಗೌಡ ಪಾಟೀಲ, ಶಂಭುಲಿಂಗನಗೌಡ ಪಾಟೀಲ, ಶಂಕ್ರಪ್ಪ ಅಂಗಡಿ, ಶರಣಪ್ಪ ಚಿಂತಾಮಣಿ, ಶರಣಬಸವನಗೌಡ ಪಾಟೀಲ, ತಾತನಗೌಡ ಪಾಟೀಲ, ಪರಮೇಶಗೌಡ ಪಾಟೀಲ, ದೇವೇಂದ್ರಪ್ಪ ಅಬ್ಬಿಗೇರಿ, ಶರಣಪ್ಪ ಬಿನ್ನಾಳ, ಕುಬೇರಪ್ಪ ಗೋರವರ, ದೇವಪ್ಪ ವದ್ನಾಳ, ಮಹಾಂತೇಶ ಬಂಡಿವಡ್ಡರ, ಹನುಮಂತ ಹಳ್ಳಿಕೇರಿ, ಬ್ಲಡ್ ಬ್ಯಾಂಕಿನ ದೇವೇಂದ್ರಪ್ಪ ಹಿಟ್ನಾಳ, ಸಿಬ್ಬಂದಿ ಮೋಹನ ಕುಮಾರ್, ಆನಂದ, ವಿಜಯ ಕುಮಾರ್, ಪ್ರಕಾಶ, ಪವನ್ ಪಿ.ಆರ್. ಗ್ರಾಮದ ಆಶಾ ಕಾರ್ಯಕರ್ತೆರು, ಸಿಬ್ಬಂದಿಇತರರು ಪಾಲ್ಗೊಂಡಿದ್ದರು.
ತಾಲ್ಲೂಕಿನ ವದಗನಾಳ ಗ್ರಾಮದಿಂದ ಎರಡು ಟ್ರ್ಯಾಕ್ಟರ್ ರೊಟ್ಟಿಯನ್ನು ದೇವಿ ಸನ್ನಿಧಿಗೆ ಅರ್ಪಿಸಲಾಯಿತು.
ಗಂಗಾಪೂಜೆ:
ಮಂಗಳವಾರ ಬೆಳಿಗ್ಗೆ 4ಕ್ಕೆಗಂಗಾಪೂಜೆ ಕಾರ್ಯಕ್ರಮದ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಗಿನ ಪಾಯಸ ಜರುಗಿತು. ಮೇ 15ರಂದು ಬೆಳಿಗ್ಗೆ 10ಕ್ಕೆ ರುದ್ರಾಕ್ಷಿ ಸರಗಳ ಮೆರವಣಿಗೆ ನಡೆಯಿತು. ಮಧ್ಯಾಹ್ನ 4ಕ್ಕೆ ವಿವಿಧ ಮಠದ ಶ್ರೀಗಳ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದೆ.ಸಂಜೆ 5ಕ್ಕೆ ದೇವಿಯ ನೂತನ ರಥೋತ್ಸವ ಜರುಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.