ಕೊಪ್ಪಳ: ಜಯತೀರ್ಥರ (ಟೀಕಾರಾಯರ) ಆರಾಧನಾ ಮಹೋತ್ಸವ ಅಂಗವಾಗಿ ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಸಂಭ್ರಮದಿಂದ ರಥೋತ್ಸವ ಜರುಗಿತು.
ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ರಾಯರ ಮಠಕ್ಕೆ ಭೇಟಿ ನೀಡಿ ಬೃಂದಾವನದ ದರ್ಶನ ಪಡೆದರು. ಮಠದ ವತಿಯಿಂದ ಸುಪ್ರಭಾತ, ಜಯತೀರ್ಥ ಸ್ತುತಿ ಪಾರಾಯಣ, ಅಷ್ತೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ ಅಲಂಕಾರ, ತೀರ್ಥಪ್ರಸಾದ ಕಾರ್ಯಕ್ರಮಗಳು ನಡೆದವು.
ರಾಯರ ಬೃಂದಾವನ ಹಾಗೂ ಎದುರು ಇರುವ ಆಂಜನೇಯನ ದೇವಸ್ಥಾನದಲ್ಲಿ ತರಹೇವಾರಿ ಹೂಗಳಿಂದ ಹೂವಿನ ಅಲಂಕಾರ ಮಾಡಲಾಗಿತ್ತು. ಮಠದ ಪ್ರಧಾನ ಅರ್ಚಕ ಪಂಡಿತ್ ರಘುಪ್ರೇಮಾಚಾರ್ ಮುಳಗುಂದ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ವ್ಯವಸ್ಥಾಪಕ ಜಗನ್ನಾಥ ಹುನುಗುಂದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಂಜೆ ಪಂಡಿತ್ ಹನುಮೇಶಚಾರ್ಯ ಗಂಗೂರ್ ಅವರಿಂದ ಉಪನ್ಯಾಸ ಮತ್ತು ಆಕಾಶವಾಣಿ ಕಲಾವಿದೆ ಕಲಬುರಗಿಯ ಶ್ರುತಿ ವಿಜಯೀಂದ್ರ ಸಗರ ಅವರ ಭಕ್ತಿ ಸಂಗೀತ ಜರುಗಿದವು. ರಾತ್ರಿ ಕೂಡ ಭಕ್ತರು ಮಠಕ್ಕೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.