ADVERTISEMENT

ಜಾತ್ರಾ ಮಹೋತ್ಸವ ಯಶಸ್ಸಿಗೆ ಸೂಚನೆ

ಕನಕಾಚಲಪತಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:01 IST
Last Updated 10 ಫೆಬ್ರುವರಿ 2026, 7:01 IST
ಕನಕಗಿರಿಯ ಕನಕಾಚಲಪತಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿದರು
ಕನಕಗಿರಿಯ ಕನಕಾಚಲಪತಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿದರು   

ಕನಕಗಿರಿ: ‘ಐತಿಹಾಸಿಕ ಪ್ರಸಿದ್ದಿ ಕನಕಾಚಲಪತಿ ಜಾತ್ರಾ ಮಹೋತ್ಸವದ ಯಶಸ್ವಿಗೆ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸಗಳನ್ನು ಸರಿಯಾಗಿ ನಿಭಾಯಿಸಬೇಕು. ಜವಾಬ್ದಾರಿ ಮರೆತರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.

ಇಲ್ಲಿನ ಕನಕಾಚಲಪತಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಭಕ್ತರಿಗೆ ಸಮಸ್ಯೆಯಾಗದಿರಲು ಮೊದಲ ಬಾರಿಗೆ ಸಹಾಯವಾಣಿ ತೆರೆಯಲಾಗುವುದು. ಕುಡಿಯುವ ನೀರು, ಪಾದ ಯಾತ್ರಿಕರಿಗೆ ವಸತಿ ಸೌಲಭ್ಯ ಸೇರಿದಂತೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

‘ದೇಗುಲವನ್ನು ವಿದ್ಯುತ್ ದೀಪಗಳಿಂದ ಅಲಂಕಾರಿಸಬೇಕು. ವಿದ್ಯುತ್‌ ವ್ಯತ್ಯೆಯವಾಗದಂತೆ ನಿಗಾ ಇಡಬೇಕು. ಎಪಿಎಂಸಿ ಆವರಣದಲ್ಲಿ ಸ್ವಚ್ಛತೆ, ಬೆಳಕಿನ ವ್ಯವಸ್ಥೆ, ವಿಶೇಷ ಪೊಲೀಸ್ ಬಂದೋ ಬಸ್ತ್ ಒದಗಿಸಬೇಕು’ ಎಂದರು.

‘ಚಿದಾನಂದ ಅವಧೂತರ ಮಠದ ಆವರಣದಲ್ಲಿ ಅನ್ನ ದಾಸೋಹವನ್ನು ಸಮಿತಿ ವತಿಯಿಂದಲೆ ಮಾಡಲಾಗುವುದು, ದಾಸೋಹ‌ ಸಮಿತಿ ರಚಿಸಿ ಜವಾಬ್ದಾರಿ ನೀಡಲಾಗುವುದು’ ಎಂದು ತಿಳಿಸಿದರು.

‘ರಾಜಬೀದಿಯಲ್ಲಿ ನೀರು ಹರಿಸಿ ಉಚ್ಛಾಯ ಹೊತ್ತು ಸಾಗುವ ತೇರಿನ‌ ಕೆಲಸಗಾರರಿಗೆ ಅನುಕೂಲ ಮಾಡಬೇಕು,‌ ಚರಂಡಿ ಸ್ವಚ್ಛಗೊಳಿಸಿ ಸಾಂಕ್ರಾಮಿಕ ರೋಗಬಾರದಂತೆ ತಡೆಯಬೇಕೆಂದು ತಿಳಿಸಿದರು.

ಭಕ್ತರ ಆರೋಗ್ಯ ತಪಾಸಣೆಗೆ ತಾತ್ಕಾಲಿಕ ಆಸ್ಪತ್ರೆ ತೆರೆದು ಚಿಕಿತ್ಸೆ‌ ಒದಗಿಸುವುದು, ದೇಗುಲ‌ ಸಮಿತಿ ವತಿಯಿಂದ ತೇರಿಗೆ ವಿಶೇಷವಾಗಿ‌ ಹೂವಿನಿಂದ ಅಲಂಕಾರ ಮಾಡಲಾಗುವುದು, ಪ್ರತಿ ಗ್ರಾಮ ಪಂಚಾಯಿತಿ ವತಿಯಿಂದ ತಲಾ ಎರಡು‌ ನೀರಿನ‌ ಟ್ಯಾಂಕರ್ ವ್ಯವಸ್ಥೆ ಕಲ್ಪಿಸುವುದು, ಸಂಚಾರ ಅಡಚಣೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು’ ಎಂದರು.

ಲೋಕೋಪಯೋಗಿ ಇಲಾಖೆಯವರು ತೇರು ಪರೀಕ್ಷಿಸಿ ಸಂಚಾರದ ಅರ್ಹತಾ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಿದರು.

ಪ್ರಮುಖರಾದ ದುರ್ಗಾದಾಸ ಯಾದವ, ಬಿ.‌ಕನಕಪ್ಪ, ಯಂಕಾರೆಡ್ಡಿ ಓಣಿಮನಿ, ರುದ್ರಮುನಿ ದೋಟಿಹಾಳ, ಅಯ್ಯನಗೌಡ, ಇತರರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ.‌ಸುರೇಶ ಇಟ್ನಾಳ, ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಪ್ರಭಾರ‌ ಇಒ ರಾಜಶೇಖರ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ‌ ಕಟ್ಟಿಮನಿ,‌ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗ, ಹುಲಿಹೈದರ ಸಂಸ್ಥಾನದ ರಾಜಾ ಶರತ್‌ ನಾಯಕ ಸೇರಿದಂತೆ ಪಟ್ಟಣ‌ ಪಂಚಾಯಿತಿ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.