ಕಾರಟಗಿ: ‘ಎಸ್ಎಸ್ಎಲ್ಸಿ ಹಂತ ವಿದ್ಯಾರ್ಥಿ ಜೀವನದಲ್ಲೇ ಮಹತ್ವದ್ದಾಗಿದ್ದು ಭವಿಷ್ಯಕ್ಕೆ ಅಡಿಪಾಯವಾಗಿದೆ. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಶ್ರದ್ದೆ, ಬದ್ಧದತೆಯಿಂದ ಶ್ರಮಿಸಬೇಕು’ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮುನಿರಾಬಾದ್ನ ಹಿರಿಯ ಉಪನ್ಯಾಸಕ ಸೋಮಶೇಖರಗೌಡ ಪಾಟೀಲ ಹೇಳಿದರು.
ಅವಿಭಜಿತ ಗಂಗಾವತಿ ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಯ ನಿಮಿತ್ತ ಮರ್ಲಾನಹಳ್ಳಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಮಾತನಾಡಿದರು.
‘ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಬೇಕು. ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಕಲಿಕಾ ಮಟ್ಟದಲ್ಲಿ ಬೋಧನೆ ನಡೆಸಬೇಕು. ಶಿಕ್ಷಕರು ಶ್ರಮವಹಿಸಿ ಸೃಜನಾತ್ಮಕ ಚಟುವಟಿಕೆಗಳು ಮತ್ತು ಬೋಧನೆಯೊಂದಿಗೆ ಕಲಿಕಾ ವಾತಾವರಣವನ್ನು ಬದಲಾಯಿಸಿ ಉತ್ತಮ ಫಲಿತಾಂಶ ಬರುವಂತೆ ಅಗತ್ಯ ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಂತೆ ಸಿದ್ಧಪಡಿಸಬೇಕು. ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಈಗಿನಿಂದಲೇ ವ್ಯವಸ್ಥಿತ ಕಾರ್ಯಕ್ರಮ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಯಾದಿ ಮಾಡಿ ಅವರಿಗೆ ವಿಶೇಷ ಬೋಧನೆ ಮಾಡಬೇಕು. ತಾಂತ್ರಿಕ ಉಪಕರಣಗಳು, ಕಲಿಕೋಪಕರಣಗಳು, ಸ್ಮಾರ್ಟ್ ಕ್ಲಾಸ್ಗಳೊಂದಿಗೆ ಕಠಿಣ ವಿಷಯಗಳನ್ನು ಅರ್ಥೈಸಿಕೊಳ್ಳುವಂತೆ ಮಾಡಬೇಕು. ವಿದ್ಯಾರ್ಥಿಗಳ ಮನೆಗೆ ಭೇಟಿ, ದೂರವಾಣಿ ಮಾಡುವ ಮೂಲಕ ನಿರಂತರ ಕಲಿಕೆಯಲ್ಲಿ ತೊಡಗುವಂತೆ ಮಾಡಲು ಮುಂದಾಗಿ’ ಎಂದರು.
ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕುಗಳ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಮುಖ್ಯಗುರುಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.