ಕಾರಟಗಿ: ಪಟ್ಟಣದ ಸರ್ವೋದಯ ವೇದಿಕೆಯ ನೇತೃತ್ವದಲ್ಲಿ ಬೃಹತ್ ಶಿವಲಿಂಗದ ಮೆರವಣಿಗೆಯು ಕರ್ಪೂರದ ದೀಪೋತ್ಸವದೊಂದಿಗೆ ಬುಧವಾರ ಸಡಗರ, ಸಂಭ್ರಮದೊಂದಿಗೆ ವೈಭವದಿಂದ ನಡೆಯಿತು.
ಕೆರೆಬಸವೇಶ್ವರ ದೇವಸ್ಥಾನದ ಬಳಿ ವೇದಿಕೆಯ ಸೋಮನಾಥಸ್ವಾಮಿ ಗಣಾಚಾರಿ, ಅರ್ಚಕ ಮುತ್ತಯ್ಯಸ್ವಾಮಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆಕರ್ಷಕ ವಿದ್ಯುತ್ ದೀಪಗಳ ಅಲಂಕಾರದ ಟ್ರ್ಯಾಕ್ಟರ್ನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ದಾರಿಯುದ್ದಕ್ಕೂ ಕರ್ಪೂರ ಹಚ್ಚುತ್ತ, ಶಿವನ ಭಕ್ತಿಗೀತೆಗಳಿಗೆ ತಕ್ಕಂತೆ ನೃತ್ಯ ಮಾಡುತ್ತ, ಜಯಘೋಷ ಹಾಕುತ್ತ ಮೆರವಣಿಗೆ ಸಾಗಿತು.
ಮೆರವಣಿಗೆಯು ಕನಕದಾಸ ವೃತ್ತ, ರಾಜ್ಯ ಹೆದ್ದಾರಿ, ಹಳೆಯ ಬಸ್ನಿಲ್ದಾಣ, ಡಾ. ರಾಜಕುಮಾರ ಕಲಾ ಮಂದಿರ ಮಾರ್ಗವಾಗಿ ಶರಣಬಸವೇಶ್ವರ ಕಲ್ಯಾಣ ಮಂಟಪ ತಲುಪಿತು. ಪಟ್ಟಣ ಸಹಿತ ವಿವಿಧೆಡೆಯ ನೂರಾರು ಶಿವಮಾಲಾಧಾರಿಗಳು ಶ್ರದ್ಧಾ, ಭಕ್ತಿಯೊಂದಿಗೆ ಪಾಲ್ಗೊಂಡಿದ್ದರು. ಮಾಲಾಧಾರಿಗಳಿಗೆ ದೇವಸ್ಥಾನದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.