ಗಂಗಾವತಿ: ‘ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕ ಕೆಲವು ಪಟ್ಟಭದ್ರರ ಕೈಯಲ್ಲಿ ಸಿಕ್ಕು ನಲುಗುತ್ತಿದೆ. ಇಂಥ ಹಿಡಿತದಿಂದ ಕಸಾಪವನ್ನು ಹೊರತರಲು ಮತ್ತು ರಾಜಕೀಯ, ಜಾತಿ ರಹಿತ ಕಸಾಪ ಕಟ್ಟಲು ನಾನು ಸಂಕಲ್ಪ ಮಾಡಿ ಈ ಬಾರಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹನುಮಂತಪ್ಪ ಅಂಡಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕಸಾಪ ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಮೇ.9 ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಡೆಯಲಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾಡೋಜ ಡಾ.ಮಹೇಶ ಜೋಶಿ ಸ್ಪರ್ಧಿಸಿದ್ದಾರೆ. ಅವರನ್ನು ನಾನು ಬೆಂಬಲಿಸಿದ್ದು, ಜಿಲ್ಲೆಯಲ್ಲಿ ನನಗೆ ಮತ ಹಾಕಲು ಮತದಾರರಲ್ಲಿ ಮನವಿ ಮಾಡುತ್ತೇನೆ’ ಎಂದು ಹೇಳಿದರು.
ಅರ್ಹ ಸಾಹಿತಿಗಳು ಕಸಾಪದೊಂದಿಗೆ ನಿರಂತರ ಸಂಪರ್ಕದಲ್ಲಿರುವ ರೀತಿ ಕೆಲಸ ಮಾಡುತ್ತೇನೆ. ರಾಜಕೀಯ, ಜಾತಿ ಹೆಸರಿನಲ್ಲಿ ಮತ ಕೇಳುವವರನ್ನು ಕಡೆಗಣಿಸಿ ಜಾತಿ, ರಾಜಕೀಯ ರಹಿತ ಹಾಗೂ ಜೀವನದುದ್ದಕ್ಕೂ ಸಾಹಿತ್ಯ ಕ್ಷೇತ್ರದ ಸಂಘಟನೆಯಲ್ಲಿರುವ ನನಗೆ ಈ ಭಾರಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಶಿಕ್ಷಕ ಹನುಮಂತಪ್ಪ ಗಿಡ್ಡಿ ಹಾಗೂ ಇಂದರಗಿ ಗ್ರಾ.ಪಂ. ಸದಸ್ಯ ಗವಿಸಿದ್ಧಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.