ಹನುಮಸಾಗರ: ಹಣಕ್ಕಾಗಿ ಸಮೀಪದ ನಿಲೋಗಲ್ ಗ್ರಾಮದ ಪರಸಪ್ಪ ಅವರನ್ನು ಅಪಹರಣ ಮಾಡಿದ್ದ ಇಬ್ಬರು ಆರೋಪಿಗಳನ್ನು ಹನುಮಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಗೇಶ್ವರ ಸತ್ಯನಾರಾಯಣ ನೆಕ್ಕಂಟಿ, ರಾಘವೇಂದ್ರ ಚಂದ್ರಶೇಖರ ಹೂಗಾರ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ: ನಿಲೋಗಲ್ನ ಪರಸಪ್ಪ ಅವರನ್ನು ಗ್ರಾಮದ ಹೊರವಲಯದಲ್ಲಿ ಡಿ.2ರಂದು ಅಪಹರಣ ಮಾಡಿದ್ದ ಆರೋಪಿಗಳು, ಆತನ ಮಗ ಭೀಮಪ್ಪ ಕೊತಬಾಳ ಅವರಿಗೆ ಕರೆಮಾಡಿ ‘ನಿಮ್ಮ ತಂದೆಯನ್ನು ಅಪಹರಿಸಿದ್ದು, ಬಿಡುಗಡೆಗೆ ₹ 1 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡದೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ಕುಷ್ಟಗಿ ಸಿಪಿಐ ಚಂದ್ರಶೇಖರ ಹಾಗೂ ಹನುಮಸಾಗರ ಪಿಎಸ್ಐ ಅಮರೇಶ ಹುಬ್ಬಳ್ಳಿ, ಸಿಬ್ಬಂದಿಗಳಾದ ಡಿ.ಕೆ.ನಾಯಕ್, ಬಸವರಾಜ ಗೌಡರ, ರವಿ ನಡುವಿನಮನಿ, ಶ್ರೀಧರ ಅವರನ್ನು ಒಳಗೊಂಡ ತಂಡವು ದೂರು ದಾಖಲಾದ 18 ಗಂಟೆಗಳ ಒಳಗಾಗಿ ಕಾರಟಗಿ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಿಂದ ಇಂಡಿಕಾ ಕಾರು, ಎರಡು ಮೊಬೈಲ್ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಹಣಕ್ಕಾಗಿ ಅಪಹರಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.