ಕನಕಗಿರಿ: ‘ಕನಕಗಿರಿ ಹಾಗೂ ಕಾರಟಗಿ ತಾಲ್ಲೂಕಿನ ನೋಂದಾಯಿತ 6970 ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸಲಾಗುತ್ತದೆ’ ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಹಾರ ಧಾನ್ಯದ ಕಿಟ್ ಪಡೆಯಲು ನೂರಾರು ಕಟ್ಟಡ ಕಾರ್ಮಿಕರು ಮುಗಿಬಿದ್ದ ಕಾರಣ ಕಾರ್ಮಿಕ ಇಲಾಖೆಯ ಅಧಿಕಾರಿಗಳ ವಿರುದ್ದ ಶಾಸಕ ದಢೇಸೂಗೂರು ಅವರು ಆಕ್ರೋಶಗೊಂಡರು.
ಪತ್ರಕರ್ತರ ಜತೆಗೆ ಮಾತನಾಡಿದ ಶಾಸಕ,‘ಅಧಿಕಾರಿಗಳು ಆಹಾರ ಧಾನ್ಯದ ಕಿಟ್ ವಿತರಣಾ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ಮಾಡಿಲ್ಲ. ಹೀಗಾಗಿ ಔಪಚಾರಿಕವಾಗಿ ನಾಲ್ಕು ಜನರಿಗೆ ನೀಡಲಾಗಿದೆ. ಜು. 5 ರಂದು ಮತ್ತೊಮ್ಮೆ ವಿತರಣೆ ಮಾಡಲಾಗುವುದು’ ಎಂದು ತಿಳಿಸಿದರು.
ಶಿರಿವಾರ ಗ್ರಾಮದಲ್ಲಿ ನಿರ್ಮಿಸಲು ಯೋಜಿಸಿರುವ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ಗೆ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ₹25 ಕೋಟಿ ಅನುದಾನ ಬಿಡುಗಡೆ ಹಾಗೂ ಪಾರ್ಕ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ಕ್ಷೇತ್ರದ ಮುಖಂಡರೊಂದಿಗೆ ಜು. 1 ರಂದು ತೋಟಗಾರಿಕೆ ಸಚಿವ ಆರ್.ಶಂಕರ್ ಅವರನ್ನು ಭೇಟಿ ಮಾಡಲಾಗುತ್ತದೆ ಎಂದು ಹೇಳಿದರು.
ಪ್ರವಾಸಿ ಮಂದಿರದಿಂದ ವಾಲ್ಮೀಕಿ ವೃತ್ತದವರೆಗೆ ಸಿ.ಸಿ ರಸ್ತೆ, ಚರಂಡಿ ಹಾಗೂ ಡಾಂಬರೀಕರಣ ಕಾಮಗಾರಿಗೆ ₹4.50 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ, ಕಾರ್ಮಿಕ ನಿರೀಕ್ಷಕ ಜಿ.ಬಿ.ದೂಪದ ಮಾತನಾಡಿ,‘ಔಪಚಾರಿಕವಾಗಿ ಆಹಾರ ಧಾನ್ಯದ ಕಿಟ್ ವಿತರಿಸುವ ಸಲುವಾಗಿ 25 ಜನರಿಗೆ ಮಾತ್ರ ಬರಲು ತಿಳಿಸಲಾಗಿತ್ತು. ವಿಷಯ ತಿಳಿದ ನೂರಾರು ಕಾರ್ಮಿಕರು ಜಮಾವಣೆಗೊಂಡಿದ್ದಾರೆ’ ಎಂದು ಅವರು ಹೇಳಿದರು.
ತಹಶೀಲ್ದಾರ್ ರವಿ ಅಂಗಡಿ, ಬಿಜೆಪಿ ಮಂಡಳ ಅಧ್ಯಕ್ಷ ಮಹಾಂತೇಶ ಸಜ್ಜನ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರವೀಂದ್ರ ಸಜ್ಜನ , ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣ ಕನಕಪ್ಪ, ಮಂಡಲ ಅಧ್ಯಕ್ಷ ಹನುಮಂತಪ್ಪ ಬಸರಿಗಿಡದ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿರುಮಲಮ್ಮ, ಮಾಜಿ ಸದಸ್ಯರಾದ ಮಂಜುನಾಥರೆಡ್ಡಿ ಮಾದಿನಾಳ, ರವಿ ಭಜಂತ್ರಿ, ಪ್ರಮುಖರಾದ ಕನಕರೆಡ್ಡಿ ಕೆರಿ, ಪ್ರಕಾಶ ಹಾದಿಮನಿ, ವಾಗೀಶ ಹಿರೇಮಠ, ರಂಗಪ್ಪ ಕೊರಗಟಗಿ ಹಾಗೂ ಹರೀಶ ಪೂಜಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.