ADVERTISEMENT

ಕೊಪ್ಪಳ: ‘ಭೂತ ಬಂಗಲೆ’ಯಂತಾದ ಸಿಬ್ಬಂದಿ ವಸತಿಗೃಹಗಳು

ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ

ನಾರಾಯಣರಾವ ಕುಲಕರ್ಣಿ
Published 13 ಸೆಪ್ಟೆಂಬರ್ 2025, 5:18 IST
Last Updated 13 ಸೆಪ್ಟೆಂಬರ್ 2025, 5:18 IST
ಕುಷ್ಟಗಿ ತಾಲ್ಲೂಕಿನ ನಿಡಶೇಸಿ ಮೊರಾಜಿ ವಸತಿ ಶಾಲೆ ಸಿಬ್ಬಂದಿ ವಸತಿಗೃಹಗಳು ಹಾಳು ಬಿದ್ದಿರುವುದು
ಕುಷ್ಟಗಿ ತಾಲ್ಲೂಕಿನ ನಿಡಶೇಸಿ ಮೊರಾಜಿ ವಸತಿ ಶಾಲೆ ಸಿಬ್ಬಂದಿ ವಸತಿಗೃಹಗಳು ಹಾಳು ಬಿದ್ದಿರುವುದು   

ಕುಷ್ಟಗಿ: ಶಿಕ್ಷಣ ಸಂಸ್ಥೆ ಆವರಣದಲ್ಲಿಯೇ ಶಿಕ್ಷಕರು, ಸಿಬ್ಬಂದಿ ಇರಲಿ ಎಂಬ ಸದುದ್ದೇಶದಿಂದ ಸರ್ಕಾರ ಲಕ್ಷಾಂತರ ಅನುದಾನದಲ್ಲಿ ಶಿಕ್ಷಕರು, ಪ್ರಾಚಾರ್ಯರು ಮತ್ತು ಸಿಬ್ಬಂದಿಗಾಗಿ ವಸತಿಗೃಹಗಳನ್ನೇನೊ ನಿರ್ಮಿಸಿದೆ. ಆದರೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಕೆಲವು ವಸತಿಗೃಹಗಳು ಭೂತ ಬಂಗಲೆಯಂತಾಗಿವೆ.

ತಾಲ್ಲೂಕಿನ ನಿಡಶೇಸಿ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಕಂಡುಬರುವ ಚಿತ್ರ.

ದಶಕದಿಂದಲೂ ಈ ಮನೆಗಳಲ್ಲಿ ಸಿಬ್ಬಂದಿ ವಾಸ ಮಾಡಿಲ್ಲ. ಹೋಗಲಿ ಯಾರೂ ಇರದಿದ್ದರೂ ಕನಿಷ್ಟ ಮನೆಗಳನ್ನು ಸುಸ್ಥಿತಿಯಲ್ಲಿಡುವುದಕ್ಕೆ ಪ್ರಯತ್ನಿಸಬಹುದಾಗಿತ್ತು. ಆದರೆ ವಸತಿ ಶಾಲೆಯ ಜವಾಬ್ದಾರಿ ಸ್ಥಾನದಲ್ಲಿದ್ದವರ ನಿರ್ಲಕ್ಷ್ಯದಿಂದ ಮನೆಗಳಿಗೆ ದುಸ್ಥಿತಿ ಬಂದಿದೆ. ತಮ್ಮ ಕಣ್ಮುಂದೆಯೇ ವಸತಿಗೃಹಗಳು ಹಾಳಾಗುತ್ತಿದ್ದರೂ ಅವುಗಳ ಬಗ್ಗೆ ಗಮನಹರಿಸದಿರುವುದು ಕಂಡುಬಂದಿದೆ.

ADVERTISEMENT

ನಿಯಮಗಳ ಪ್ರಕಾರ ವಸತಿ ಶಾಲೆಗಳ ಸಿಬ್ಬಂದಿ ಅಲ್ಲಿಯ ವಸತಿ ಗೃಹಗಳಲ್ಲಿಯೇ ಇರುವುದು ಕಡ್ಡಾಯ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇರುವುದಕ್ಕೆ ಹಿಂದೇಟು ಹಾಕುವ ಸಿಬ್ಬಂದಿ ಪಟ್ಟಣ ಮತ್ತಿತರೆ ಕಡೆಗಳಲ್ಲಿ ಠಿಕಾಣಿ ಹೂಡಿದ್ದಾರೆ. ಪ್ರಾಚಾರ್ಯರದ್ದೂ ಸೇರಿ ಒಟ್ಟು 13 ವಸತಿಗೃಹಗಳಿವೆ. ಇವುಗಳಲ್ಲಿ 6 ಹಳೆಯ ಕಟ್ಟಡಗಳಿದ್ದು, ಇಬ್ಬರು ಸಿಬ್ಬಂದಿ ಕುಟುಂಬದವರು ಮಾತ್ರ ವಾಸವಾಗಿದ್ದಾರೆ. ಉಳಿದವುಗಳನ್ನು ಹಾಳುಗೆಡವಲಾಗಿದೆ. 6 ಹೊಸ ಗೃಹಗಳಲ್ಲಿ ಮೂವರು ಮಾತ್ರ ಇದ್ದಾರೆ. ಆದರೂ ಕೆಲ ಸಿಬ್ಬಂದಿ ಹೆಸರಿನಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದ್ದು ಮಾಸಿಕ ಕನಿಷ್ಟ ಬಾಡಿಗೆಯನ್ನೂ ವೇತನದಲ್ಲಿ ಕಡಿತ ಮಾಡಲಾಗುತ್ತಿದೆ. ಆದರೆ ಮನೆಗಳಿಗೆ ಹಾಕಿದ ಬೀಗ ಮಾತ್ರ ತೆರೆದು ದೀಪ ಹಚ್ಚುವವರಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಾಚಾರ್ಯರ ಕೊಠಡಿಯೂ ಬಾಗಿಲು ತೆರೆದಿಲ್ಲ, ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು ನಿರ್ಲಕ್ಷ್ಯಕ್ಕೆ ಸಾಕ್ಷ್ಯ ಒದಗಿಸುವಂತಿವೆ. ಹಳೆಯ ನಾಲ್ಕು ಗೃಹಗಳು ಹಾಳು ಬಿದ್ದಿದ್ದು ಮೂಲಗಳ ಪ್ರಕಾರ ಕಟ್ಟಿದಾಗಿನಿಂದಲೂ ಇವುಗಳಲ್ಲಿ ಯಾರೂ ವಾಸಿಸಿಲ್ಲ. ಕಟ್ಟಡ ಗಟ್ಟಿಮುಟ್ಟಾಗಿದ್ದರೂ ನಿರ್ವಹಣೆ ಇಲ್ಲದ ಕಾರಣ ವಿದ್ಯುತ್‌ ವೈರ್‌ಗಳು, ನೀರಿನ ಪೈಪ್‌ಗಳು ಕಿತ್ತುಹೋಗಿವೆ. ಶಾಲೆಗೆ ಮಂಜೂರಾಗಿರುವ ಮಂಚಗಳನ್ನು ಈ ಹಾಳು ಮನೆಗಳಲ್ಲಿ ಇಡಲಾಗಿದೆ. ಕೊಠಡಿಗಳಲ್ಲಿ ಹಳೆಯ ಸಾಮಗ್ರಿ, ಪುಸ್ತಕಗಳ ರಾಶಿ ಬಿದ್ದಿವೆ. ಛಾವಣಿಯ ಮೇಲೆ ನಲ್ಲಿ ನೀರು ನಿರಂತರವಾಗಿ ಸೋರುತ್ತಿದ್ದು ಪಾಚಿಗಟ್ಟಿದೆ ಅಷ್ಟೇ ಏಕೆ ಕಸ ಬೆಳೆದು ನಿಂತಿದೆ. ಪ್ರತಿವರ್ಷ ನಿರ್ವಹಣೆ ಹೆಸರಿನಲ್ಲಿ ಲಕ್ಷಾಂತರ ಹಣ ಖರ್ಚಾಗುತ್ತಿದ್ದರೂ ಮನೆಗಳನ್ನು ಸ್ವಚ್ಛಗೊಳಿಸುವ ಪ್ರಯತ್ನೂ ನಡೆಯದಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ಛಾವಣಿ ಮೇಲೆ ನೀರು ನಿಂತು ಹಸಿರು ಕಸಬೆಳೆದು ನಿಂತಿರುವುದು
ಕೆಲ ವಸತಿಗೃಹಗಳು ದುರಸ್ತಿಗೆ ಬಂದಿದ್ದು ಎಂಜಿನಿಯರ್‌ ಪರಿಶೀಲಿಸಿದ್ದಾರೆ. ದುರಸ್ತಿಯಾದ ನಂತರ ಸಿಬ್ಬಂದಿಗೆ ಹಂಚಿಕೆ ಮಾಡಲಾಗುತ್ತದೆ. ಪ್ರಾಚಾರ್ಯರ ಕೊಠಡಿಯೂ ದುರಸ್ತಿಯಲ್ಲಿದ್ದು ಅದನ್ನು ಸರಿಪಡಿಸಿದ ನಂತರ ನಾನೂ ಅದರಲ್ಲಿಯೇ ವಾಸ ಮಾಡುತ್ತೇನೆ.
– ನಾಗರಾಜ ಸಂಗನಾಳ, ಪ್ರಾಚಾರ್ಯ

ದುಸ್ಥಿತಿ ಕಟ್ಟಡದ ಬಗ್ಗೆ ಪತ್ರ

ತರಗತಿ ಕೊಠಡಿಗಳು ಕಚೇರಿ ಕಂಪ್ಯೂಟರ್ ಕೊಠಡಿ ಸೇರಿದಂತೆ ಅನೇಕ ಕೊಠಡಿಗಳ ಸಂಕೀರ್ಣ ಕಟ್ಟಡ ಸಂಕೀರ್ಣ ಮಳೆ ನೀರಿಗೆ ಸೋರುತ್ತವೆ. ಛಾವಣಿ ದುರಸ್ತಿ ಮಾಡಿದರೂ ಪುನಃ ಗೋಡೆಗಳು ತೇವಗೊಳ್ಳುತ್ತವೆ. ಕಲ್ಲಿನಿಂದ ನಿರ್ಮಾಣವಾಗಿರುವ ಗೋಡೆಗಳು ಮಾತ್ರ ಗಟ್ಟಿಮುಟ್ಟಾಗಿವೆ. ಈ ಕಟ್ಟಡ ಕಟ್ಟಿ ಮೂರು ದಶಕವಾಗಿದ್ದು ಕಳಪೆ ಕಾಮಗಾರಿಯಿಂದಾಗಿ ಆರೇಳು ವರ್ಷದ ಹಿಂದೆಯೇ ದುರಸ್ತಿಗೆ ಬಂದಿದೆ. ಇದು ಸುಸ್ಥಿತಿಯಲ್ಲಿದ್ದುದು ಕೇವಲ ಹತ್ತು ವರ್ಷ ಮಾತ್ರ ಎನ್ನಲಾಗಿದೆ. ಈಗ ಕಟ್ಟಡದ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪ್ರಾಚಾರ್ಯ ನಾಗರಾಜ ಸಂಗನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಠಡಿಯಲ್ಲಿ ಬಳಕೆಯಾಗದ ಮಂಚಗಳು ಪುಸ್ತಕದ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.