ಕೊಪ್ಪಳ: ಒಂದು ಬೈಕ್ ಕಳ್ಳತನದ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಮುಂದಾದಾಗ ಪೊಲೀಸರಿಗೆ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಜನರು ಕಳೆದುಕೊಂಡ ಬೈಕ್ಗಳು ಕೂಡ ಸಿಕ್ಕಿವೆ.
ಆಗಸ್ಟ್ 18ರಂದು ತಾಲ್ಲೂಕಿನ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯರುವ ಕೂಕನಪಳ್ಳಿ ಎನ್ನುವ ಗ್ರಾಮದಲ್ಲಿ ನಡೆಯುವ ಸಂತೆಗೆ ತೆರಳಿದ್ದ ಗಿಣಿಗೇರಿಯ ಬಾಳಪ್ಪ ಸಿಂಧೋಗಿ ಎನ್ನುವವರ ₹50 ಸಾವಿರ ಮೌಲ್ಯದ ಬೈಕ್ ಕಳೆದುಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ಆರೋಪಿಯ ಬೆನ್ನು ಬಿದ್ದ ಪೊಲೀಸರು ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿದಾಗ ಗಂಗಾವತಿ ತಾಲ್ಲೂಕಿನ ಉಡುಮಕಲ್ ಗ್ರಾಮದ 26 ವರ್ಷದ ಶರಣಪ್ಪ ಮರಳಿ ಎಂಬಾತ ಸಿಂಧನೂರು, ಕಂಪ್ಲಿ, ಹೊಸಪೇಟೆ, ಕುಷ್ಟಗಿ, ಹುಲಿಗಿ ಹಾಗೂ ಕೊಪ್ಪಳ ನಗರದಲ್ಲಿ ವಿವಿಧೆಡೆ ಬೈಕ್ಗಳನ್ನು ಕಳ್ಳತನ ಮಾಡಿದ ವಿಷಯ ಗೊತ್ತಾಗಿದೆ. ಆರೋಪಿಯಿಂದ ₹16 ಲಕ್ಷ ಮೌಲ್ಯದ 24 ಬೈಕ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
‘ಮುನಿರಾಬಾದ್ ಪೊಲೀಸ್ ಠಾಣೆಯ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಒಂದು ಬೈಕ್ ಕಳ್ಳತನ ಮಾಡಿದ ಪ್ರಕರಣದ ಆರೋಪಿಯ ಬೆನ್ನು ಬಿದ್ದಾಗ ಬೇರೆ ಕಡೆಯೂ ಕಳ್ಳತನ ಮಾಡಿದ ವಿಷಯ ಬಹಿರಂಗವಾಗಿದೆ. ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದು, ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.