ಕೊಪ್ಪಳ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ನಿತ್ಯದ ಚಟುವಟಿಕೆಗಳಿಂದ ಏಕಾತನತೆ ಅನುಭವಿಸಿದ್ದ ಕೈದಿಗಳಿಗೆ ಭಾನುವಾರ ಹಬ್ಬದ ಖುಷಿ. ಕವಿಗೋಷ್ಠಿ, ಉಪನ್ಯಾಸ ಹಾಗೂ ವಿವಿಧ ಕಾರ್ಯಕ್ರಮಗಳ ಅವರ ಮನಸ್ಸಿಗೆ ಮುದ ನೀಡಿದವು.
ಗೋಕಾವಿ ಗೆಳೆಯರ ಬಳಗ ಹಾಗೂ ಜಿಲ್ಲಾ ಕಾರಾಗೃಹ ಸಂಯುಕ್ತಾಶ್ರಯದಲ್ಲಿ ಬಂದಿಗಳ ಮನ:ಪರಿವರ್ತನೆ ಅಂಗವಾಗಿ ಕವಿಗೋಷ್ಠಿ, ಉಪನ್ಯಾಸ ಜರುಗಿದವು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಮಾತನಾಡಿ ‘ಬಂದಿಗಳ ಮನ:ಪರಿವರ್ತನೆಗೆ ಈ ರೀತಿಯ ವಿಭಿನ್ನ ಕಾರ್ಯಕ್ರಮಗಳು ಅನುಕೂಲವಾಗಲಿವೆ. ಇದರ ಪ್ರಯೋಜನ ಪಡೆದು ಹೊಸ ಬದುಕು ಕಟ್ಟಿಕೊಳ್ಳಬೇಕು’ ಎಂದರು.
ಸಾಹಿತಿ ಸುರೇಶ ಹನಂಗಡಿ ಬದುಕು ಮತ್ತು ಹೋರಾಟ ಎಂಬ ವಿಷಯದ ಬಗ್ಗೆ ಮಾತನಾಡಿ ‘ಕಾರಾಗೃಹಕ್ಕೆ ಬಂದೊಡನೆ ಬಂದಿಗಳ ಬದುಕು ಮುಗಿದು ಹೋಗುವುದಿಲ್ಲ. ತಿಳಿದು, ತಿಳಿಯದೆಯೋ ತಪ್ಪು ಮಾಡಿ ಬಂದ ನೀವುಗಳು ಕಾನೂನಾತ್ಮಕ ಹೋರಾಟ ಮಾಡಿ ಕಾರಾಗೃಹದಿಂದ ಬಿಡುಗಡೆ ಹೊಂದಿ ಹೊಸ ಬದುಕು ಕಟ್ಟಿಕೊಳ್ಳಿ’ ಎಂದು ಹೇಳಿದರು.
ರೂಪಕಧಾರಿ ಈಶ್ವರಚಂದ್ರ ಬೇಟಗೇರಿ ಅವರು ಕೃಷ್ಣನ ವೇಷ ತೊಟ್ಟು ಗಮನ ಸೆಳದರು. ವಿಠ್ಠಲ ಬಾಪುಕರಿ ಏಕಪಾತ್ರಾಭಿನಯದಲ್ಲಿ ಸಂಗೊಳ್ಳಿ ರಾಯಣ್ಣನ ವೇಷ ತೊಟ್ಟು ಅಭಿನಯಿಸಿದರು. ವಿವೇಕಾನಂದ ಯೋಗಕೇಂದ್ರ ಮಕ್ಕಳಿಂದ ಯೋಗ ನೃತ್ಯ, ಭರತನಾಟ್ಯ ಜರುಗಿತು.
ಮುಖ್ಯ ಅತಿಥಿಗಳಾಗಿ ಈಶ್ವರ ಮಮದಾಪೂರ, ಉದ್ದಣ್ಣ ಗೋಡೆರ, ಜಿಲ್ಲಾ ಕಾರಾಗೃಹದ ಸಹಾಯಕ ಜೈಲರ್, ಎ.ಕೆ ಹಾವೋಜಿ, ಆನಂದ ಸೊರಗಾವಿ, ಕೌಜಲಿಗಿಯ ಸಾಹಿತಿ ಪ್ರಕಾಶ ಕೋಟಿನತೋಟ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಬಂದಿಗಳನ್ನು ಎಣಿಕೆ ಮಾಡಿ ಬ್ಯಾರಾಕ್ಗಳಲ್ಲಿ ಕೂಡಿಟ್ಟರೆ ಕಾರಾಗೃಹದ ಮೂಲ ಉದ್ದೇಶ ಈಡೇರುವುದಿಲ್ಲ. ಅವರಲ್ಲಿ ಪರಿವರ್ತನೆ ತರಲು ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.ಅಂಬರೀಶ ಎಸ್. ಪೂಜಾರಿ ಜಿಲ್ಲಾ ಕಾರಾಗೃಹದ ಅಧೀಕ್ಷಕ
ಪರಿವರ್ತನಾ ಪ್ರಶಸ್ತಿ ಪ್ರದಾನ ಕೊಪ್ಪಳ: ಇಲ್ಲಿನ ಜಿಲ್ಲಾ ಕಾರಾಗೃಹದ ವತಿಯಿಂದ ಮೊದಲ ಬಾರಿಗೆ ಪರಿವರ್ತನಾ ಪ್ರಶಸ್ತಿ ಸ್ಥಾಪಿಸಲಾಗಿದ್ದು ಕಲೆ ಸಾಹಿತ್ಯ ಸಮಾಜ ಸೇವೆ ಹೀಗೆ ವಿವಿಧ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಪರಿವರ್ತನೆಗಾಗಿ ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಸಿದ್ದಾರ್ಥ ಲಲಿತಾ ಕಲಾ ಅಕಾಡೆಮಿಯ ಪ್ರಾಚಾರ್ಯ ಜಯಾನಂದ ಮಾದರ ಅವರಿಗೆ ಈ ಗೌರವ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.