ಕೊಪ್ಪಳ: ‘ಮುಂಬರುವ ದಿನಗಳಲ್ಲಿ ಎಂಎಸ್ಪಿಎಲ್ ಸೇರಿದಂತೆ ವಿವಿಧ ಕಾರ್ಖಾನೆಗಳು ವಿಸ್ತರಣೆಯಾದರೆ ದೂಳಿನ ಪ್ರಮಾಣ ವ್ಯಾಪಕವಾಗುತ್ತದೆ’ ಎಂದು ಜಿಲ್ಲಾ ಬಚಾವೊ ಆಂದೋಲನ ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಸೆ. 24ರ ವರೆಗೆ ನಡೆಯಲಿರುವ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ಹಮ್ಮಿಕೊಂಡ ಪರಿಸರ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಎಂಎಸ್ಪಿಎಲ್ ವಿಸ್ತರಣೆ ಜೊತೆಗೆ ಸುಮಿ ಎನ್ನುವ ಜಪಾನಿನ ಇನ್ನೊಂದು ಕಂಪನಿ ಕೂಡ ಬರಲಿದೆ. ಈ ಕಾರ್ಖಾನೆಗಳ ದೂಳಿನಿಂದ ಪರಿಸರ ಇನ್ನಷ್ಟು ಹಾಳಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಗವಿಶ್ರೀ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಮಹಾಂತೇಶ ಮಲ್ಲನಗೌಡರ ಮಾತನಾಡಿ ‘ಬೃಹತ್ ಕಾರ್ಖಾನೆಗಳಿಂದ ನಗರ ವ್ಯಾಪ್ತಿಯ ಮನೆಗಳಲ್ಲಿ ಹೊಗೆ ಹಾಗೂ ದೂಳು ಆವರಿಸಿಕೊಂಡಿದೆ. ಮತ್ತಷ್ಟು ಕಾರ್ಖಾನೆಗಳು ಬಂದರೆ ಪರಿಸ್ಥಿತಿ ಮತ್ತಷ್ಟು ದುರ್ಬರವಾಗುತ್ತದೆ’ ಎಂದರು.
ಮುಖಂಡರಾದ ಕರೀಮಪಾಷಾ ಎಂ.ಗಚ್ಚಿನಮನಿ, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಎಸ್.ಎ.ಗಫಾರ್, ಡಿ.ಎಚ್. ಪೂಜಾರ, ಚನ್ನಬಸಪ್ಪ ಅಪ್ಪಣವರ, ಮುದುಕಪ್ಪ ಹೊಸಮನಿ, ಗುಡದಪ್ಪ ಭಂಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹಂಚಳಪ್ಪ ಇಟಗಿ ಪಾಲ್ಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.