ಸಾಂದರ್ಭಿಕ ಚಿತ್ರ
– ಪ್ರಜಾವಾಣಿ ಚಿತ್ರ
ಕೊಪ್ಪಳ: ‘ತಾಲ್ಲೂಕಿನ ಮಂಗಳಾಪುರ ಗ್ರಾಮದ ಜನರಿಗೆ ಸ್ಮಶಾನಕ್ಕಾಗಿ ಸಮೀಪದ ಕೋಳೂರು ವ್ಯಾಪ್ತಿಯಲ್ಲಿ ಜಾಗ ಮಂಜೂರು ಮಾಡಲಾಗಿದ್ದು, ಇದಕ್ಕೆ ನಮ್ಮ ವಿರೋಧವಿದೆ’ ಎಂದು ಕೋಳೂರು ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಕೋಳೂರು ಗ್ರಾಮದ ಸರ್ಕಾರಿ ಪರಂಪೋಕ್ ಜಮೀನು ಸರ್ವೆ ಸಂಖ್ಯೆ 48ರಲ್ಲಿ ಒಂದು ಎಕರೆ 25 ಗಂಟೆ ಜಾಗ ಇದ್ದು ಅದನ್ನು ಮೊದಲಿನಿಂದಲೂ ಬಳಕೆ ಮಾಡಿಕೊಂಡಿದ್ದೇವೆ. ಇದರಲ್ಲಿ 20 ಗುಂಟೆ ಭೂಮಿ ಸುಮಾರು ವರ್ಷಗಳಿಂದ ಮುಸ್ಲಿಂ ಸಮುದಾಯದವರು ಖಬರಸ್ಥಾನಕ್ಕಾಗಿ ಬಳಸಿಕೊಂಡಿದ್ದಾರೆ. ಈಗ ಮತ್ತೆ ಅಲ್ಲಿಯೇ ಮಂಗಳಾಪುರದ ಗ್ರಾಮಸ್ಥರಿಗೂ ಸ್ಮಶಾನ ಭೂಮಿ ನೀಡಲಾಗಿದೆ’ ಎಂದು ಗ್ರಾಮಸ್ಥರು ದೂರಿದರು.
‘ಆ ಜಾಗದಲ್ಲಿ ಜಾಮೀಯಾ ಮಸೀದಿ, ಹಾಲು ಉತ್ಪಾದಕ ಸಂಘದ ಹಾಲಿನ ಡೈರಿ, ಸರ್ಕಾರದ ಮಾರಾಟ ಮಳಿಗೆ, ರಾಜಕಾಲುವೆ, ಹಿರೇಹಳ್ಳಕ್ಕೆ ಸಿ.ಸಿ. ರಸ್ತೆ ಮತ್ತು ಹಳ್ಳದ ಪಕ್ಕದಲ್ಲಿ ಸರ್ಕಾರಿ ಕಟ್ಟಡಿವೆ. ಅಲ್ಲಿ ಯಾವುದೇ ಸರ್ಕಾರಿ ಭೂಮಿ ಇಲ್ಲದಿದ್ದರೂ ಕೊಪ್ಪಳ ತಹಶೀಲ್ದಾರ್ ಮಂಗಳಾಪುರ ಗ್ರಾಮದ ಜನರಿಗೆ ಖಬರಸ್ತಾನಕ್ಕಾಗಿ ಬಳಸಿಕೊಳ್ಳುತ್ತಿರುವ ಭೂಮಿಯನ್ನು ರುದ್ರಭೂಮಿಯಾಗಿ ಬಳಸಿಕೊಳ್ಳಲು ಆದೇಶ ಮಾಡಿದ್ದಾರೆ. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದು, ಇದನ್ನು ವಾಪಸ್ ಪಡೆಯಬೇಕು’ ಎಂದು ಕೋಳೂರು ಗ್ರಾಮದ ಮಾರುತಿ ವಾಲ್ಮೀಕಿ, ಮಹಮ್ಮದ್ ಅಲಿ ಹಾಗೂ ಗ್ರಾಮಸ್ಥರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.