ADVERTISEMENT

ಕೊಪ್ಪಳದಲ್ಲಿ ಕಾರ್ಖಾನೆ ಸ್ಥಾಪನೆಗೆ ನಮ್ಮ ವಿರೋಧ ಇದೆ: ಸಂಸದ ಕೆ.ರಾಜಶೇಖರ ಹಿಟ್ನಾಳ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 6:47 IST
Last Updated 14 ಸೆಪ್ಟೆಂಬರ್ 2025, 6:47 IST
   

ಕೊಪ್ಪಳ: ‘ಕ್ಷೇತ್ರದಲ್ಲಿ ಕಾರ್ಖಾನೆ ಸ್ಥಾಪನೆಗೆ ನಮ್ಮ ವಿರೋಧ ಇದೆ. ತಾಲ್ಲೂಕಿನ ಕನಕಾಪುರ ವ್ಯಾಪ್ತಿಯಲ್ಲಿ ಮುಕ್ಕುಂದ ಸುಮಿ ಕಾರ್ಖಾನೆ ವಿಸ್ತರಣೆಗೆ ವಿರೋಧ ಮಾಡುತ್ತೇವೆ. ಜಿಲ್ಲೆಯ ಬೇರೆ ಕಡೆಗೆ ಬೇಕಾದರೆ ಮಾಡಲಿ’ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ತಮ್ಮ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೈಗಾರಿಕೆಗಳಿಗೆ ನಮ್ಮ ವಿರೋಧ ಇಲ್ಲ. ಆದರೆ ಜನವಸತಿ ಪ್ರದೇಶದಲ್ಲಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಬಾರದು. ಅದಕ್ಕಾಗಿ ಬಿಎಸ್‌ಪಿಎಲ್‌  ರ್ಖಾನೆ ನಮ್ಮಲ್ಲಿ ಬೇಡ ಎಂದು ವಿರೋಧಿಸಿದ್ದೇವೆ, ಎಲ್ಲರೂ ಪಕ್ಷಾತೀತವಾಗಿ ವಿರೋಧಿಸಿದ್ದೇವೆ’ ಎಂದರು.

‘ಹೂಡಿಗೆದಾರರ ಸಮಾವೇಶದಲ್ಲಿ ₹10 ಲಕ್ಷ ಕೋಟಿ ಹೂಡಲಾಗಿದೆ ಎಂದು ಹೇಳಿದ್ದು ಇದು ಅನುಷ್ಠಾನವಾಗಿದೆ. ₹54 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತೇವೆ ಎಂದು ಬಿಎಸ್‌ಪಿಎಲ್ ಹೇಳಿದೆ. ವಾಸ್ತವವಾಗಿ ಇಷ್ಟು ದೊಡ್ಡ ಪ್ರಮಾಣದ ಹಣ ಹೂಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮುಕ್ಕುಂದ ಸುಮಿ ಕಾರ್ಖಾನೆ ಎಲ್ಲಿ ಸ್ಥಾಪನೆ ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಕನಕಾಪುರ ಸೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಎಲ್ಲಿ ಸ್ಥಾಪನೆ ಮಾಡಿದರೂ ವಿರೋಧಿಸುತ್ತೇವೆ’ ಎಂದರು.

ADVERTISEMENT

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಆಗಸ್ಟ್ 2024ರ ಅಂತ್ಯದಲ್ಲಿ 190 ಅಪಘಾತಗಳು ಆಗಿದ್ದು ಅದರಲ್ಲಿ 59 ಸಾವುಗಳು ಸಂಭವಿಸಿದ್ದವು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾ ಪೋಲಿಸ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಪರಿಶಿಲಿಸಿದಾಗ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ವಣಬಳ್ಳಾರಿ, ಬೂದಗುಂಪಾ ಕ್ರಾಸ್, ಅಮರೇಶ್ವರ ದೇವಸ್ಥಾನ ಕ್ರಾಸ್, ತುಂಗಭದ್ರಾ ನದಿ ಸೇತುವೆ-1 ಹತ್ತಿರ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು ಅತಿ ವೇಗವೇ ಕಾರಣ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅಪಘಾತ ವಲಯವಾದ ಈ ಸ್ಥಳಗಳಲ್ಲಿ ಅನುಮತಿಸಿದ ವೇಗಕ್ಕಿಂತ ಹೆಚ್ಚು ವೇಗವಾಗಿ ಸಂಚರಿಸುವ ವಾಹನಗಳ ಮೇಲೆ ನಿಯಂತ್ರಣ ಮಾಡುವ ಉದ್ದೇಶದಿಂದ ಸಿಸಿಟಿವಿ ಕ್ಯಾಮರಾ ಅಳವಡಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಅಳವಂಡಿ-ಬೆಟಗೇರಿ, ಸಿಂಗಟಾಲೂರು ಏತನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಸೋಲಾರ್ ಪ್ಲಾಂಟ್‍ಗಳಿಗೆ ನೀಡಲಾದ ಜಮೀನು ನೀರಾವರಿ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ. ಜಿಲ್ಲಾಧಿಕಾರಿಗಳು ನಿಯಂತ್ರಣ ಮಾಡಬೇಕು. ಈ ನಿಟ್ಟಿನಲ್ಲಿ ನಾನೂ ಧ್ವನಿ ಎತ್ತುತ್ತೇನೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ವಿದ್ಯುತ್ ದೀಪ, ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ರಸ್ತೆ ಬದಿಗಳಲ್ಲಿ ಆಸ್ಪತ್ರೆಗಳನ್ನು ತೆರೆಯುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು. ನಗರದಲ್ಲಿ ಬಾಕಿ ಇರುವ ರೈಲ್ವೆ ಉಪಮಾರ್ಗ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆಗಳಿದ್ದವು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಕೆಲ ಗೊಂದಲಗಳಿದ್ದವು. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ರಾಜ್ಯದ ಮುಖ್ಯಮಂತ್ರಿಗಳೊಂದಿಗೂ ಮಾತನಾಡಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಭಾಗ್ಯನಗರದ ಮೇಲ್ಸೇತುವೆ ಕೆಳಗೆ ಸರಕು ಗೋದಾಮು ಇದ್ದು, ಇದರಿಂದ ಭಾಗ್ಯನಗರದ ರಸ್ತೆ ಹಾಳಾಗಿರುವ ಮಾಹಿತಿ ಇದೆ. ಬೇರೆ ಸ್ಥಳಾಂತರ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ರಸ್ತೆ ಬೇಕಾಗಿದ್ದು, ಈ ಎಲ್ಲ ವಿಷಯಗಳ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.