ADVERTISEMENT

ಕೊಪ್ಪಳ: ಅಕ್ರಮ ಹೋಂ ಸ್ಟೇ ವಿದ್ಯುತ್‌ ಕಡಿತ

ಸಾಣಾಪುರದಲ್ಲಿ ಅತ್ಯಾಚಾರ, ಯುವಕನ ಕೊಲೆ ಬಳಿಕ ಎಚ್ಚೆತ್ತ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 13:47 IST
Last Updated 18 ಮಾರ್ಚ್ 2025, 13:47 IST
   

ಗಂಗಾವತಿ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಾಣಾಪುರದಲ್ಲಿ ಇತ್ತೀಚೆಗೆ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಹಾಗೂ ಯುವಕನ ಕೊಲೆ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಅಕ್ರಮವಾಗಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನು ನಡೆಸುತ್ತಿದ್ದವರಿಗೆ ಚಾಟಿ ಬೀಸಿದ್ದಾರೆ.

ಸಾಣಾಪುರ ಮತ್ತು ಆನೆಗೊಂದಿ ಭಾಗದಲ್ಲಿ ಅಕ್ರಮವಾಗಿ ಪಡೆಯಲಾಗಿದ್ದ ವಿದ್ಯುತ್‌ ಸಂಪರ್ಕವನ್ನು ಮಂಗಳವಾರ ಕಡಿತ ಮಾಡಲಾಗಿದೆ. ಹೋಟೆಲ್‌ಗಳಿಗೂ ಇದರ ಬಿಸಿ ತಟ್ಟಿದೆ. ಘಟನೆ ಬಳಿಕ ಸರಣಿ ಸಭೆ ನಡೆಸಿರುವ ಜಿಲ್ಲಾಡಳಿತ ಅಕ್ರಮ ರೆಸಾರ್ಟ್‌ ಮತ್ತು ಹೋಂ ಸ್ಟೇ ಗಳಿಗೆ ಕಡಿವಾಣ ಹಾಕಲು ತಂಡಗಳನ್ನು ರಚಿಸಿದೆ.

ತಹಶೀಲ್ದಾರ್‌, ಅರಣ್ಯ, ಪ್ರವಾಸೋದ್ಯಮ, ಅಬಕಾರಿ, ಪೊಲೀಸ್ ಮತ್ತು ಜೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಆನೆಗೊಂದಿ, ಸಾಣಾಪುರ ಭಾಗದಲ್ಲಿ ಕಾರ್ಯಾಚರಣೆ ನಡೆಸಿತು. ಸಾಣಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಭೂಮಿಯಲ್ಲಿ ಗುಡಿಸಲು ಕೊಠಡಿಗಳು ನಿರ್ಮಿಸಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದವರು ಸಮಯವಕಾಶ ನೀಡುವಂತೆ ಕೋರಿದರೆ, ಇನ್ನೂ ಕೆಲವರು ತಮ್ಮ ರೆಸಾರ್ಟ್‌ ಕುರಿತು ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ದಾಖಲೆ ತೋರಿಸಿದರು.

ADVERTISEMENT

‘ಅಕ್ರಮವಾಗಿ ನಿರ್ಮಿಸಿಕೊಂಡಿರುವ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳನ್ನು ತೆರವು ಮಾಡುವಂತೆ ಹಿಂದೆ ನೋಟಿಸ್‌ ನೀಡಿದ್ದರೂ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಈಗ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗಿದೆ’ ಎಂದು ಗಂಗಾವತಿ ತಹಶೀಲ್ದಾರ್‌ ಯು. ನಾಗರಾಜ ತಿಳಿಸಿದರು.

ಹಿಂದೆ ಇದೇ ರೀತಿಯ ಕಾರ್ಯಾಚರಣೆ ನಡೆಸಿದ ಕೆಲವೇ ದಿನಗಳಲ್ಲಿ ರೆಸಾರ್ಟ್‌ಗಳು ಹಾಗೂ ಹೋಂ ಸ್ಟೇಗಳ ಮಾಲೀಕರು ಅಧಿಕಾರಿಗಳ ಗಮನಕ್ಕೆ ತಾರದೇ ಮರಳಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದರು. ಇದರ ಬಗ್ಗೆ ಎಚ್ಚರಿಕೆ ನೀಡಿದ ಪೊಲೀಸರು ಈಗಲೂ ಅದೇ ರೀತಿ ಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.