ಕೊಪ್ಪಳ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಅನೇಕ ಹಳ್ಳಕೊಳ್ಳಗಳು ತುಂಬಿವೆ. ತಾಲ್ಲೂಕಿನ ಮುದ್ಲಾಪುರ ಗ್ರಾಮದ ಹಿರೇಹಳ್ಳ ಜಲಾಶಯದ ನಾಲ್ಕು ಕ್ರಸ್ಟ್ಗೇಟ್ಗಳ ಮೂಲಕ ಮಂಗಳವಾರ ನೀರು ಹೊರಬಿಡಲಾಗಿದ್ದು ಹೊಲಗಳಿಗೆ ನೀರು ನುಗ್ಗಿದೆ.
ತಾಲ್ಲೂಕಿನ ಕಾಟ್ರಹಳ್ಳಿ, ಕೋಳೂರು, ಗೊಂಡಬಾಳ, ಹಿರೇಸಿಂಧೋಗಿ, ಚಿಕ್ಕಸಿಂಧೋಗಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಗೊಂಡಬಾಳದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದೆ. ಹಳ್ಳದ ದಂಡೆಯಲ್ಲಿರುವ ಹೊಲಗಳಿಗೆ ರಭಸವಾಗಿ ನೀರು ಹರಿದು ಬಂದಿದೆ.
ಮೆಕ್ಕಜೋಳ, ಹತ್ತಿ, ಸಜ್ಜೆ, ಉಳ್ಳಾಗಡ್ಡಿ, ಟೊಮೊಟೊ ಬೆಳೆಗಳು ನೀರಿನಲ್ಲಿ ನಿಂತಿವೆ. ಚಿಕ್ಕಸಿಂಧೋಗಿಗೆ ಹಿರೇಸಿಂಧೋಗಿ ಮಾರ್ಗದ ಮೂಲಕ ಹೋಗುವ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದಲ್ಲಿ ಓಡಾಡಬೇಕಾದರೆ ಹಲಗೇರಿ ಮೂಲಕ ಬರಬೇಕಾಗಿದೆ.
ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗುಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.