ADVERTISEMENT

ಕೊಪ್ಪಳ: ವಿಜೃಂಭಣೆಯ ಕನಕಾಚಲಪತಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 15:47 IST
Last Updated 14 ಮಾರ್ಚ್ 2023, 15:47 IST
ಕನಕಾಚಲಪತಿ ರಥೋತ್ಸವ... ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮಂಗಳವಾರ ಕನಕಾಚಲಪತಿ ರಥೋತ್ಸವ ಜರುಗಿತು  –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕನಕಾಚಲಪತಿ ರಥೋತ್ಸವ... ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮಂಗಳವಾರ ಕನಕಾಚಲಪತಿ ರಥೋತ್ಸವ ಜರುಗಿತು –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ   

ಕನಕಗಿರಿ (ಕೊಪ್ಪಳ ಜಿಲ್ಲೆ): ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿರುವ ಇಲ್ಲಿನ ಕನಕಾಚಲಪತಿ ಮಹಾರಥೋತ್ಸವ ಮಂಗಳವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ ಕನಕಾಚಲಪತಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ರಥದ ಮುಂಭಾಗದಲ್ಲಿ ರಥಾಂಗ ಹೋಮ, ಹವನ, ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ತಳಿರು ತೋರಣ, ಗೊಂಬೆ, ಹೂವು, ಬಾವುಟ, ಐದು ಪ್ರಕಾರದ ಚಟ್ಟಗಳನ್ನು ಕಟ್ಟಿ ರಥವನ್ನು ಶೃಂಗರಿಸಲಾಗಿತ್ತು. ರಾಜಬೀದಿಯಲ್ಲಿ ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತ ಸಮೂಹ ಬಾಳೆ ಹಣ್ಣು, ಉತ್ತತ್ತಿ, ಹೂ ತೇರಿನತ್ತ ಎಸೆದು ಭಕ್ತಿ ಸಮರ್ಪಿಸಿದರು. ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.

ADVERTISEMENT

ವಿವಿಧ ಸಮಾಜ ಹಾಗೂ ಸಂಘಟನೆಗಳು ಬೃಹತ್ ಪ್ರಮಾಣದ ಹೂವಿನ ಹಾರ, ಬಾವುಟಗಳನ್ನು ಮೆರವಣಿಗೆ ಮೂಲಕ ತಂದು ತೇರಿಗೆ ಸಮರ್ಪಿಸಿದರು. ಬಾಜಾ ಭಜಂತ್ರಿ, ತಾಷಾ, ವಾದ್ಯಮೇಳ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದವು. ಜನರು ಮನೆಮಾಳಿಗೆ, ರಾಜಬೀದಿಯಲ್ಲಿ ನಿಂತು ರಥೋತ್ಸವ ಕಣ್ತುಂಬಿಕೊಂಡರು.

ತೇರು ಹನುಮಪ್ಪನ ದೇವಸ್ಥಾನ ತಲುಪಿ ಮತ್ತೆ ಪಾದಗಟ್ಟೆವರೆಗೆ ರಥವನ್ನು ಎಳೆದಾಗ ಭಕ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಪಟ್ಟಣದ ಎಪಿಎಂಸಿ ಆವರಣ, ಪೊಲೀಸ್ ವಸತಿ ಗೃಹ, ಚಿದಾನಂದಮಠ ಸೇರಿದಂತೆ ವಿವಿಧ ಸ್ಥಳದಲ್ಲಿ ತಾವು ವಾಸ್ತವ್ಯ ಹೂಡಿದ್ದ ಸ್ಥಳದಿಂದ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿದರು.

ತೇರು ಹನುಮಪ್ಪನ ದೇಗುಲ ತಲುಪಿ ಸ್ವಸ್ಥಾನಕ್ಕೆ ಮರಳುತ್ತಿದ್ದ ಸಮಯದಲ್ಲಿ ರಥ ಸಿಲುಕಿಕೊಂಡಿತು. ಜನ ಒಗ್ಗಟ್ಟಾಗಿ ಅಪಾರ ಶ್ರಮ ಹಾಕಿದರೂ ಮುಂದಕ್ಕೆ ಸಾಗಲಿಲ್ಲ. ಆ ನಂತರ ಟ್ಯ್ರಾಕ್ಟರ್‌ಗಳ ಸಹಾಯದಿಂದ ಬಿಡಿಸಿದ ಬಳಿಕ ಸುಗಮವಾಗಿ ತನ್ನ ಸ್ಥಾನಕ್ಕೆ ಬಂದು ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.