
ಕುಷ್ಟಗಿ 5ನೇ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡ್ಡಲಾಗಿರುವ ಕಟ್ಟಡಗಳು
ಕುಷ್ಟಗಿ: ಪಟ್ಟಣದ 5ನೇ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿರುವ ಒತ್ತುವರಿ ತೆರವುಗೊಳಿಸದೆ ಪುರಸಭೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2024-25ನೇ ಹಣಕಾಸು ವರ್ಷದ ₹15 ಲಕ್ಷ ಅನುದಾನದಲ್ಲಿ ಕೆಆರ್ಐಡಿಎಲ್ ಏಜೆನ್ಸಿ ಕಾಂಕ್ರೀಟ್ ಮೂಲಕ ರಸ್ತೆ ಅಭಿವೃದ್ಧಿಗೆ ಮುಂದಾಗಿದೆ. ಈಗಾಗಲೇ ಒಂದಷ್ಟು ಕೆಲಸ ನಡೆಸಲಾಗಿದ್ದು ರಸ್ತೆಗೆ ಅಡ್ಡಲಾಗಿರುವ ಒತ್ತುವರಿ ತೆರವುಗೊಳಿಸದೆ ಕಾಟಾಚಾರಕ್ಕೆ ಕಾಮಗಾರಿ ಮುಗಿಸಿ ಕೈತೊಳೆದುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ವಾರ್ಡ್ನ ನಿವಾಸಿ ಆರೋಪ.
ಮನವಿ: ಈ ಮಧ್ಯೆ ರಸ್ತೆ ಜಾಗ ಅತಿಕ್ರಮಗಣ ತೆರವುಗೊಳಿಸದೆ ಕೆಲಸ ಮುಂದುವರೆಸದಂತೆ ಸಾರ್ವಜನಿಕರು ಪುರಸಭೆಗೆ ಒತ್ತಾಯಿಸಿದ್ದು ಈ ಕುರಿತು ಗುರುವಾರ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮಾಹಿತಿಗೆ ಸಂಪರ್ಕಿಸಿದರೆ ಮುಖ್ಯಾಧಿಕಾರಿ ಕರೆ ಸ್ವೀಕರಿಸಲಿಲ್ಲ.
ಈ ವಿಷಯ ಕುರಿತು ವಿವರಿಸಿದ ಕೆಆರ್ಐಡಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇರ್ಫಾನ್, ಒತ್ತುವರಿ ತೆರವಿಗೆ ಜನರು ಒತ್ತಾಯಿಸಿದ್ದು ಈ ವಿಷಯವನ್ನು ಪುರಸಭೆ ಗಮನಕ್ಕೆ ತರಲಾಗಿದೆ. ಪುರಸಭೆಯವರು ರಸ್ತೆ ಅಭಿವೃದ್ಧಿಗೆ ಅಗತ್ಯವಾಗಿರುವ ರಸ್ತೆ ಜಾಗವನ್ನು ಗುರುತಿಸಬೇಕಾಗುತ್ತದೆ. ಹಾಗಾಗಿ ಅಲ್ಲಿಯ ವರೆಗೂ ಕೆಲಸ ಸ್ಥಗಿತಗೊಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.