ಪ್ರಜಾವಾಣಿ ವಾರ್ತೆ
ಕುಷ್ಟಗಿ: ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು ಸಹಾಯಕ ನಿರ್ದೇಶಕರಾಗಿದ್ದ ಮಹದೇವಪ್ಪ ನಾಯಕ ಅವರನ್ನು ಸ್ಥಳ ಸೂಚಿಸದೆ ಎತ್ತಂಗಡಿ ಮಾಡಲಾಗಿದೆ.
ಗಂಗಾವತಿಯಲ್ಲಿ ಕೃಷಿ ಸಹಾಯಕ ನಿರ್ದೇಶಕರಾಗಿದ್ದ ವಿ.ತಿಪ್ಪೇಸ್ವಾಮಿ ಅವರನ್ನು ಇಲ್ಲಿಯ ತೆರವಾದ ಸ್ಥಾನಕ್ಕೆ ವರ್ಗ ಮಾಡಲಾಗಿದ್ದು ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಎಂಬುವವರನ್ನು ಬೀದರ್ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಆದೇಶ ಹೊರಬಿದ್ದ ಒಂದೇ ದಿನದಲ್ಲೇ ವರ್ಗಾವಣೆ ಆದೇಶ ರದ್ದುಪಡಿಸಿ ಪುನಃ ಇದ್ದ ಸ್ಥಳದಲ್ಲಿಯೇ ಮುಂದುವರೆಸಲಾಗಿದೆ. ಅಷ್ಟೇ ಅಲ್ಲದೆ ಇನ್ನೊಬ್ಬ ಕೃಷಿ ಅಧಿಕಾರಿ ನಾಗನಗೌಡ ಪಾಟೀಲ ಅವರನ್ನೂ ಗಂಗಾವತಿಗೆ ವರ್ಗಾವಣೆ ಮಾಡಲಾಗಿದೆ.
'ನೀವು ಒಳ್ಳೆಯ ಕೆಲಸ ಮಾಡಿ ರೈತರಿಗೆ ನೆರವಾಗುತ್ತಿದ್ದೀರಿ. ನಿಮ್ಮ ಮೇಲೆ ಯಾವುದೇ ದೂರುಗಳು ಇಲ್ಲ' ಎಂದೆ ಒಂದೆಡೆ ಮುಖಸ್ತುತಿ ಮಾಡುತ್ತಿರುವ ಕೆಲ ರಾಜಕಾರಣಿಗಳು ಇನ್ನೊಂದೆಡೆ ರಾಜಧಾನಿಯಲ್ಲಿ
ಠಿಕಾಣಿ ಹೂಡಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವ ದಂಧೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ರೈತರು ರಸಗೊಬ್ಬರ ಸೇರಿದಂತೆ ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿಯೇ ಅಧಿಕಾರಿಗಳ ವರ್ಗಾವಣೆ
ನಡೆದಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿ ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.