ADVERTISEMENT

ಕುಷ್ಟಗಿ: ಪರಿಶಿಷ್ಟ ಕುಟುಂಬಕ್ಕೆ ಬಹಿಷ್ಕಾರದ ಆರೋಪ

ಕುಷ್ಟಗಿ ತಾಲ್ಲೂಕು ಕಲ್ಲಗೋನಾಳದಲ್ಲಿ ಘಟನೆ, 20 ಜನರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 22:16 IST
Last Updated 2 ಅಕ್ಟೋಬರ್ 2022, 22:16 IST
   

ಕುಷ್ಟಗಿ: ಜಗಳಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನಕಲ್ಲಗೋನಾಳದಲ್ಲಿ ಪರಿಶಿಷ್ಟ ಕುಟುಂಬವೊಂದಕ್ಕೆ ಕೆಲ ದಿನಗಳ ಹಿಂದೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಶರಣಪ್ಪ ಮಾದರ ಎಂಬುವವರ ದೂರಿನ ಅನ್ವಯ ಹನುಮಸಾಗರ ಪೊಲೀಸ್‌ ಠಾಣೆಯಲ್ಲಿ ಭಾನುವಾರ (ಅ.2) 20 ಜನರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದೆ.

ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ಆರ್‌.ಎಸ್‌.ಉಜ್ಜನಕೊಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ ಎನ್‌.ಆರ್‌. ನಿಂಗಪ್ಪ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಆಗಿದ್ದೇನು: ‘ಕಳೆದ ತಿಂಗಳು ಕುರುಬ ಸಮುದಾಯದ ಮಾರ್ತಾಂಡಪ್ಪ ಪೊಲೀಸ್ ಪಾಟೀಲ ಸಾಕಿದ್ದ ನಾಯಿ ಮೇಕೆಯನ್ನು ಕಚ್ಚಿತ್ತು. ನಾಯಿ ಕಟ್ಟಿಹಾಕಿಕೊಳ್ಳಿ ಎಂದು ದೂರುದಾರ ಶರಣಪ್ಪ ಅವರ ಅಣ್ಣ ವೀರಣ್ಣ ಹೇಳಿದ್ದರು. ಕುಪಿತಗೊಂಡ ಮಾರ್ತಾಂಡಪ್ಪ ಮತ್ತವರ ಕುಟುಂಬದವರು ವೀರಣ್ಣ ಮತ್ತು ಮಹಿಳೆಯರು, ಮಕ್ಕಳ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಬಳಿಕ ರಾಜಿಸಂಧಾನ ಆಗಿದ್ದರೂ ಮಾರ್ತಾಂಡಪ್ಪ ಕುಟುಂಬ ದ್ವೇಷ ಸಾಧಿಸುತ್ತಿತ್ತು. ನಮ್ಮ ಕುಟುಂಬದ ಜೊತೆ ಸಂಪರ್ಕ ಇಟ್ಟುಕೊಳ್ಳದಂತೆ ಧ್ವನಿವರ್ಧಕದಲ್ಲಿ ಕೆಲವರು ಹೇಳಿದ್ದರು. ಯಾರು ಮಾತನಾಡುತ್ತಿಲ್ಲ. ಬ್ಯಾರಲ್‌ನಲ್ಲಿದ್ದ ನೀರು ತೆಗೆದುಕೊಂಡು ಕುಡಿದಿದ್ದಕ್ಕೆ ಹೋಟೆಲ್‌ನವರೂ ನಿಂದಿಸಿದರು. ಊರಿನ ಒಳಗೆ ಬರದಂತೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.