ಕುಷ್ಟಗಿ: ನಕಲಿ ಕಾರ್ಡುದಾರರು ಸೇರಿಕೊಂಡಿರುವ ಕಾರಣಕ್ಕೆ ಕಟ್ಟಡ ಕಾರ್ಮಿಕರ ರಕ್ಷಣೆ ಮತ್ತು ಅವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ಥಾಪನೆಗೊಂಡಿರುವ ಕಟ್ಟಡ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸೌಲಭ್ಯಗಳಿಂದ ನೈಜ ಕಾರ್ಮಿಕರು ವಂಚಿತರಾಗಿದ್ದಾರೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದರು.
ಪಟ್ಟಣದಲ್ಲಿ ಜರುಗಿದ ಕಟ್ಟಡ ಕಾರ್ಮಿಕರ ಕೊಪ್ಪಳ ಜಿಲ್ಲಾ ಮಟ್ಟದ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಅನರ್ಹರ ಸೇರ್ಪಡೆಯಿಂದಾಗಿ ನೈಜ ಕಾರ್ಮಿಕರು ಅಸಂಘಟಿತ ರಾಗುವಂತಾಗಿದೆ. ಇದರಿಂದ ಅವರಿಗೆ ಮಂಡಳಿಯಿಂದ ಸೌಲಭ್ಯಗಳಿಂದ ದೊರೆಯುತ್ತಿಲ್ಲ. ನೈಜ ಕಾರ್ಮಿಕರು ಸಿಐಟಿಯು ನೇತೃತ್ವದ ಸಂಘಟನೆಯಲ್ಲಿ ನೋಂದಣಿ ಮಾಡಿಸುವ ಮೂಲಕ ಮಂಡಳಿ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಅವರ ನಡುವೆ ಜಾಗೃತಿ ಹಾಗೂ ಕಲ್ಯಾಣ ಮಂಡಳಿಯ ರಕ್ಷಣೆಯ ಸಲುವಾಗಿ ಜೂನ್ 26-27 ರಂದು ತುಮಕೂರಿನಲ್ಲಿ ರಾಜ್ಯ ಮಟ್ಟದ 4ನೇ ಸಮ್ಮೇಳವನ್ನು ನಡೆಸಲಾಗುತ್ತಿದೆ. 2007 ರಲ್ಲಿ ಕರ್ನಾಟಕದಲ್ಲಿ ಆರಂಭಗೊಂಡ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಪಿಂಚಣಿ, ಕೊವೀಡ್ ಪರಿಹಾರ ಸೇರಿ 19 ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಜಿಲ್ಲಾ ಸಂಚಾಲಕ ಕಾಶಿಂ ಸರ್ದಾರ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಅಧ್ಯಕ್ಷ. ನಿರುಪಾದಿ ಬೆಣಕಲ್, ವಕೀಲ ಆರ್.ಕೆ. ದೇಸಾಯಿ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಿ, ಕುಷ್ಟಗಿ ಕಟ್ಟಡ ಕಾರ್ಮಿಕ ಸಂಘದ ರಂಗಪ್ಪ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕಲಾವತಿ ಮೆಣೆದಾಳ, ಶಿವನಗೌಡ, ಅನ್ನಪೂರ್ಣಮ್ಮ, ಅಲಿಮಾ ಬೇಗಂ, ಗಂಗಾವತಿ ಕಟ್ಟಡ ಕಾರ್ಮಿಕರ ಅಧ್ಯಕ್ಷ ಮುತ್ತಣ್ಣ ಗಂಗಾವತಿ, ಕುಕನೂರಿನ ಷಣ್ಮುಖಪ್ಪ, ಹನುಮೇಶ ಇದ್ದರು. ಮಂಜುನಾಥ ಡಗ್ಗಿ ವಂದಿಸಿದರು.
ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನಾಗಿ ಕಾಶಿಂ ಸರ್ದಾರ್ (ಅಧ್ಯಕ್ಷ), ರಂಗಪ್ಪ (ಕಾರ್ಯದರ್ಶಿ), ಮಂಜುನಾಥ್ ಡಗ್ಗಿ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.