ADVERTISEMENT

ಕುಷ್ಟಗಿ: ಸಂದೀಪ್‌ ನಗರ ನಿವೇಶನ ಕಬಳಿಸಿದ ಪಟ್ಟಭದ್ರರು

ಅರ್ಹರಿಗಿಂತ ಅನರ್ಹರ ಕಾಟವೇ ಹೆಚ್ಚು; ಇನ್ನೂ ಕೊಟ್ಟಿಲ್ಲ ನಿವೇಶನ ಹಕ್ಕುಪತ್ರ

ನಾರಾಯಣರಾವ ಕುಲಕರ್ಣಿ
Published 12 ಜುಲೈ 2025, 6:29 IST
Last Updated 12 ಜುಲೈ 2025, 6:29 IST
ಕುಷ್ಟಗಿಯ ಸಂದೀಪ್ ನಗರದಲ್ಲಿನ ಪುರಸಭೆ ಜಾಗದಲ್ಲಿ ಅನಧಿಕೃತ ಶೆಡ್‌ಗಳು ನಿರ್ಮಾಣಗೊಂಡಿರುವುದು
ಕುಷ್ಟಗಿಯ ಸಂದೀಪ್ ನಗರದಲ್ಲಿನ ಪುರಸಭೆ ಜಾಗದಲ್ಲಿ ಅನಧಿಕೃತ ಶೆಡ್‌ಗಳು ನಿರ್ಮಾಣಗೊಂಡಿರುವುದು   

ಕುಷ್ಟಗಿ: ಇಲ್ಲಿಯ ಪುರಸಭೆಗೆ ಸೇರಿದ ಸಂದೀಪ್‌ ನಗರದಲ್ಲಿರುವ ಆಶ್ರಯ ಮನೆಗಳಿಗೆ ಸೇರಿದ ಖಾಲಿ ಜಾಗವನ್ನು ಅತಿಕ್ರಮಿಸಿ ಅನಧಿಕೃತ ಶೆಡ್‌ಗಳನ್ನು ನಿರ್ಮಿಸಿಕೊಳ್ಳುವುದು ಮುಂದುವರೆದಿದ್ದು ಇದರಿಂದ ಅರ್ಹ ಬಡವರು, ನಿವೇಶನ ವಂಚಿತರಾಗುವ ಸಂದರ್ಭ ಎದುರಾಗಿದೆ.

ಅನೇಕ ವರ್ಷಗಳಿಂದಲೂ ಪುರಸಭೆ ಈ ಖಾಲಿ ಜಾಗವನ್ನು ರಕ್ಷಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ಮಾಡುತ್ತಲೇ ಇರುವುದು ಕಬಳಿಸುವವರಿಗೆ ಅನುಕೂಲವಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಆಶ್ರಯ ಯೋಜನೆಯಲ್ಲಿ ನಿವೇಶನ, ಮನೆ ಒದಗಿಸಿಕೊಡುವ ಉದ್ದೇಶದಿಂದ ಸರ್ಕಾರ ಹಾವಣ್ಣ ಮತ್ತು ರಾಜಾಸಾಬ್ ಎಂಬುವವರಿಗೆ ಸೇರಿದ ಒಟ್ಟು 12 ಎಕರೆ ಜಮೀನು ಖರೀದಿಸಿತ್ತು. 1992-93ರಲ್ಲಿ ಆರು ಎಕರೆ ಜಮೀನಿನಲ್ಲಿ 123 ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಿ ಹಕ್ಕುಪತ್ರ ಕೊಟ್ಟಿತ್ತು. ನಿವೇಶನ ನೀಡಲು 144 ಫಲಾನುಭವಿಗಳನ್ನು ಗುರುತಿಸಿತ್ತು.

ADVERTISEMENT

ಅದಲು ಬದಲು: ಆದರೆ ನಿಖರವಾಗಿ ಗುರುತಿಸದೆ ಮತ್ತು ಸರ್ವೆ ಸಂಖ್ಯೆ 190ರಲ್ಲಿ ನಿರ್ಮಿಸಬೇಕಿದ್ದ ಮನೆಗಳನ್ನು ಸರ್ವೆ ಸಂಖ್ಯೆ 189ರಲ್ಲಿ ಅದೂ ಪಕ್ಕದ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ. ಈ ಜಮೀನಿಗೆ ಸಂಬಂಧಿಸಿದ ವ್ಯಾಜ್ಯ ಆಗ ನ್ಯಾಯಾಲದಲ್ಲಿದ್ದುದರಿಂದ ಹಕ್ಕುಪತ್ರಗಳನ್ನು ಈವರೆಗೂ ನೀಡಲು ಸಾಧ್ಯವಾಗಿರಲಿಲ್ಲ. ನಂತರ ವ್ಯಾಜ್ಯ ಬಗೆಹರದಿರೂ ಮೂಲ ದಾಖಲೆ, ನಕ್ಷೆಗಳು ದೊರೆಯದ ಕಾರಣ ಈಗಲೂ ಜಾಗ ಗುರುತಿಸಿ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಎಲ್ಲ 144 ಫಲಾನುಭವಿಗಳು ತಮಗೆ ಹಕ್ಕುಪತ್ರ ನೀಡುವಂತೆ ಪುರಸಭೆಗೆ ದುಂಬಾಲು ಬಿದ್ದಿದ್ದಾರೆ.

ನಿಯಮಗಳ ಪ್ರಕಾರ ಕ್ರಮ ಜರುಗಿಸಬೇಕು, ಅತಿಕ್ರಮಣದಾರರ ಶೆಡ್‌ ತೆರವುಗೊಳಿಸಿ 'ಕಮ್ಮಿ ಜಾಸ್ತಿ ಪತ್ರ' (ಕೆಜೆಬಿ) ತಯಾರಿಸುವಂತೆ ಸರ್ವೆ ಇಲಾಖೆಗೆ ಪತ್ರ ಬರೆಯಲು ಜಿಲ್ಲಾಡಳಿತ ಪುರಸಭೆ ಸೂಚಿಸಿದೆ. ಸ್ವಯಂ ಪ್ರೇರಣೆಯಿಂದ ಶೆಡ್‌, ಮನೆಗಳನ್ನು ತೆರವುಗೊಳಿಸಲು ತಾಕೀತು ಮಾಡಿದೆ. ಪುರಸಭೆ ಸೂಚನೆ ನೀಡಿದ್ದರೂ ಶೆಡ್‌ ತೆರವು ಇರಲಿ ಹೊಸದಾಗಿ ತರಾತುರಿಯಲ್ಲಿ ಹೊಸ ಶೆಡ್‌ಗಳು ನಿರ್ಮಾಣಗೊಳ್ಳುತ್ತಿರುವುದು ಕಂಡುಬಂದಿತು. 

ಸ್ವಯಂ ಪ್ರೇರಣೆಯಿಂದ ಶೆಡ್‌ ತೆರವಿಗೆ ಜನರ ಮನ ಒಲಿಸುತ್ತೇವೆ ಮಾತು ಕೇಳದಿದ್ದರೆ ಪೊಲೀಸ್‌ ನೆರವಿನಲ್ಲಿ ತೆರವುಗೊಳಿಸುವುದು ಅನಿವಾರ್ಯ.
ಮಹೇಶ ಅಂಗಡಿ ಪುರಸಭೆ ಮುಖ್ಯಾಧಿಕಾರಿ
ಸಂದೀಪ್ ನಗರದ ನಿವೇಶನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲಾಧಿಕಾರಿ ಸೂಚಿಸಿರುವಂತೆ 20x30 ಅಳತೆ ನಿವೇಶನ ಹಕ್ಕುಪತ್ರ ನೀಡಲು ಪುರಸಭೆ ಕ್ರಮ ಕೈಗೊಳ್ಳಲಿದೆ.
ದೊಡ್ಡನಗೌಡ ಪಾಟೀಲ ಶಾಸಕ

ನಿವೇಶನ ಕಬಳಿಸಿದ ಸ್ಥಿತಿವಂತರು:

ಪುರಸಭೆ ಗುರುತಿಸಿರುವ ಫಲಾನುಭವಿಗಳ ಹೊರತಾಗಿ ಅನಧಿಕೃತ ವ್ಯಕ್ತಿಗಳು ಖಾಲಿ ಪ್ರದೇಶವನ್ನು ಕಬಳಿಸಿರುವ ನೂರಕ್ಕೂ ಹೆಚ್ಚು ಜನರು ಶೆಡ್‌ಗಳು ಹಾಗೂ ಪಕ್ಕಾ ಮನೆಗಳನ್ನೂ ನಿರ್ಮಿಸಿಕೊಂಡಿದ್ದು ತಾವು ದಶಕದಿಂದ ಇದೇ ಜಾಗದಲ್ಲಿ ವಾಸಿಸುತ್ತಿದ್ದು ತಮಗೂ ಹಕ್ಕುಪತ್ರ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಇವರಲ್ಲಿ ಬಹುತೇಕರು ಸ್ಥಿತಿವಂತರಾಗಿದ್ದು ಪಟ್ಟಣದಲ್ಲಿ ಮನೆ ನಿವೇಶನ ಹೊಂದಿರುವವರು ಹಾಲಿ ಮಾಜಿ ಶಾಸಕರ ಬೆಂಬಲಿಗರು ನೌಕರರು ಗುತ್ತಿಗೆದಾರರು ವ್ಯಾಪಾರಿಗಳು ಬಡಾವಣೆ ಮಾಲೀಕರು ವಿವಿಧ ಸಂಘಟನೆಗಳಿಗೆ ಸೇರಿದವರೂ ಇದ್ದಾರೆ. ಇದರಿಂದ ಅರ್ಹರಿಗಿಂತ ಅನರ್ಹರೇ ಪುರಸಭೆಗೆ ತಲೆನೋವಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.