ADVERTISEMENT

ಕೊಪ್ಪಳ | ಸರ್ಕಾರಿ ಜಾಗ ಬಿಟ್ಟು ಕೊಡದವರಿಗೆ ನೋಟಿಸ್

ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 5:22 IST
Last Updated 9 ಜನವರಿ 2022, 5:22 IST

ಕುಷ್ಟಗಿ: ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಅನುಮೋದಿತ ಬಡಾವಣೆಗಳಲ್ಲಿನ ಉದ್ಯಾನ, ನಾಗರಿಕ ಸೌಲಭ್ಯಕ್ಕೆ ಮೀಸಲಾದ ಸರ್ಕಾರದ ಜಾಗಗಳನ್ನು ಬಿಟ್ಟುಕೊಡಬೇಕು. ಅಲ್ಲಿ ಸದ್ಯ ಕಟ್ಟಡಗಳು ಅಥವಾ ಯಾವುದೇ ನಿರ್ಮಾಣಗಳಿದ್ದರೂ ಇದ್ದ ಸ್ಥಿತಿಯಲ್ಲಿ ಅವುಗಳನ್ನು ಪುರಸಭೆಗೆ ಒಪ್ಪಿಸಲು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಡಬೇಕು ಎಂದು ಮುಖ್ಯಾಧಿಕಾರಿ ಉಮೇಶ ಹಿರೇಮಠ ತಿಳಿಸಿದ್ದಾರೆ.

ಈ ವಿಷಯ ಕುರಿತು ಶನಿವಾರ ಇಲ್ಲಿ ಹೇಳಿಕೆ ನೀಡಿದ ಅವರು, ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿನ ಷರತ್ತಿನ ಪ್ರಕಾರ ಉದ್ಯಾನ, ನಾಗರಿಕ ಸೌಲಭ್ಯಕ್ಕೆ ಮೀಸಲಾದ ಸರ್ಕಾರದ ಜಾಗಗಳು ಸರ್ಕಾರದ ಆಸ್ತಿಯಾಗಿರುತ್ತವೆ. ಆದರೆ ಅನೇಕ ವರ್ಷಗಳು ಕಳೆದರೂ ಬಡಾವಣೆ ಮಾಲೀಕರು ಸರ್ಕಾರದ ನಿಯಮಗಳನ್ನು ಕಡೆಗಣಿಸಿದ್ದಾರೆ. ಹಾಗಾಗಿ ಕಟ್ಟಡಗಳು ಅಥವಾ ಯಾವುದೇ ನಿರ್ಮಾಣಗಳಿದ್ದರೂ ಇದ್ದ ಸ್ಥಿತಿಯಲ್ಲಿ ಅವುಗಳನ್ನು ಪುರಸಭೆಗೆ ಒಪ್ಪಿಸಬೇಕು ಮತ್ತು ಸರ್ಕಾರಕ್ಕೆ ನೋಂದಣಿ ಕಡ್ಡಾಯವಾಗಿ ಮಾಡಿಸಿಕೊಡಲೇ ಬೇಕು. ಈ ಕಾರಣಕ್ಕೆ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಒಂದೊಮ್ಮೆ ಅದಕ್ಕೆ ಮಣಿಯದಿದ್ದರೆ ಪುರಸಭೆ ಮುಲಾಜಿಲ್ಲದೆ ಕಾನೂನು ಕ್ರಮಗಳನ್ನು ಜರುಗಿಸಲಿದೆ ಎಂದರು.

ಪುರಸಭೆ ಅಧ್ಯಕ್ಷ ಗಂಗಾಧರ ಹಿರೇಮಠ ಸೇರಿ ಮೂವರಿಗೆ ನೋಟಿಸ್‌ ಜಾರಿ ಮಾಡಿದ ಬಗ್ಗೆ ಜ.8ರ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ನೋಟಿಸ್‌ ನೀಡಿದ್ದು ತಮ್ಮ ಗಮನಕ್ಕೆ ಬಂದಿಲ್ಲ ಎಂದೆ ಮುಖ್ಯಾಧಿಕಾರಿ ಉಮೇಶ ಹಿರೇಮಠ ಆಗ ತಿಳಿಸಿದ್ದರು. ಆದರೆ ತುರ್ತು ಕೆಲಸದ ಒತ್ತಡದಲ್ಲಿದ್ದಾಗ ಸ್ಪಷ್ಟ ಹೇಳಿಕೆ ನೀಡಲು ಸಾಧ್ಯವಾಗಿರಲಿಲ್ಲ ಎಂದು ಶನಿವಾರ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.