ADVERTISEMENT

ದ್ವೇಷ ಬಿಟ್ಟು ಪ್ರೇಮದ ಬದುಕು ಕಟ್ಟಿಕೊಳ್ಳಿ: ಗವಿಸಿದ್ದೇಶ್ವರ ಸ್ವಾಮೀಜಿ

ಭೋಗಾಪುರೇಶ್ವರ ಕೆರೆ ಲೋಕಾರ್ಪಣೆ: ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 7:16 IST
Last Updated 31 ಮಾರ್ಚ್ 2023, 7:16 IST
ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದಲ್ಲಿ ಗುರುವಾರ ಭೋಗಾಪುರೇಶ್ವರ ಕೆರೆ ಲೋಕಾರ್ಪಣೆ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು
ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದಲ್ಲಿ ಗುರುವಾರ ಭೋಗಾಪುರೇಶ್ವರ ಕೆರೆ ಲೋಕಾರ್ಪಣೆ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದರು   

ಕನಕಗಿರಿ: ‘ಜಗತ್ತಿನಲ್ಲಿ ನಿಸರ್ಗಕ್ಕಿಂತ‌ ಮಿಗಿಲಾದ ವಸ್ತು ಮತ್ತೊಂದಿಲ್ಲ. ಅದನ್ನು ಪ್ರೀತಿಸುತ್ತ ದ್ವೇಷ ಬಿಟ್ಟು ಪ್ರೇಮದ ಬದುಕು ಕಟ್ಟಿಕೊಳ್ಳಬೇಕು’ ಎಂದು ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ನವಲಿ ಗ್ರಾಮದಲ್ಲಿ ಗುರುವಾರ ನಡೆದ ನೂತನ ಭೋಗಾಪುರೇಶ್ವರ ಕೆರೆ ಲೋಕಾರ್ಪಣೆ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ‘ನಿಸರ್ಗದಲ್ಲಿ ಸಿಗುವ ಮಣ್ಣು, ನೀರು, ಗಾಳಿ ಎಂದಿಗೂ ಕಲುಷಿತಗೊಳಿಸಬಾರದು. ಪ್ರಕೃತಿಯನ್ನು ಪ್ರೀತಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು’ ಎಂದರು.

‘ಬದುಕನ್ನು ಉತ್ತಮ ವಿಚಾರಗಳಿಗೆ ಉಪಯೋಗಿಸಬೇಕು, ಮದ್ಯಸೇವನೆ, ಗುಟ್ಕಾ, ಜೂಜಾಟದಂಥ ಕೆಟ್ಟ ಚಟಗಳಿಂದ ದೂರ ಇರಬೇಕು. ಗಲೀಜು ನೀರು ಕುಡಿದು ಬೆಳೆದ ತೆಂಗಿನ ಮರ ಬಹು ಉಪಯೋಗಿಯಾಗಿದೆ. ಮುಸುರಿ ನೀರು ಕುಡಿದ ಹಸು ಹಾಲು, ಮೊಸರು, ತುಪ್ಪ ನೀಡುತ್ತದೆ. ಅದರಂತೆ ಮನುಷ್ಯ ಪ್ರಕೃತಿಯ ಋಣವನ್ನು ಉಂಡು ಸಮಾಜಮುಖಿಯಾಗಿರಬೇಕು’ ಎಂದರು.

ADVERTISEMENT

‘ಯುವಕರು ಶ್ರಮವಹಿಸಿ ಹೊಸ ಕೆರೆ ನಿರ್ಮಾಣ ಮಾಡಿದ್ದು ಅಭಿವೃದ್ಧಿಯ ಸಂಕೇತಕ್ಕೆ ಸಾಕ್ಷಿಯಾಗಿದೆ. ಎಲ್ಲರೂ ನೀರಿ‌ನ‌ ಮಹತ್ವ ಅರಿತು ಬಳಕೆ ಮಾಡಬೇಕು. ಪ್ರಪಂಚದಲ್ಲಿ ನಾವೆಲ್ಲರೂ ನೆಪ ಮಾತ್ರ. ಮನುಷ್ಯ ನಿಸರ್ಗವನ್ನು ಹಾಳು ಮಾಡಬಾರದು, ಕಾಲ ಕೆಟ್ಟಿದೆ ಎಂದು ಹೇಳುತ್ತಾರೆ ಆದರೆ; ಕಾಲ ಕೆಟ್ಟಿಲ್ಲ ಮನುಷ್ಯನ ಮನಸ್ಸು ಕೆಟ್ಟಿದೆ. ಉತ್ತಮ ವಿಚಾರಗಳನ್ನು ಕಲಿಯಬೇಕು, ಜೀವನದಲ್ಲಿ ನಿರಾಸೆ, ದುಃಖ, ಸುಖ, ದುಮ್ಮಾನ, ಸಂತೋಷ ಸಮಾನವಾಗಿ ಸ್ವೀಕರಿಸಬೇಕು’ ಎಂದರು.

ಕೆರೆ ಅಭಿವೃದ್ಧಿ ಸಮಿತಿ ಸದಸ್ಯ ವಿರೂಪಣ್ಣ ಕಲ್ಲೂರು ಮಾತನಾಡಿ ’ಸ್ಥಳೀಯರ ಸಹಕಾರ, ಗವಿಶ್ರೀಗಳ ಪ್ರೇರಣೆಯಿಂದ ಕೆರೆ ಅಭಿವೃದ್ಧಿ ಪಡಿಸಲಾಗಿದೆ’ ಎಂದರು.

ಶಾಸಕ ಬಸವರಾಜ ದಢೇಸೂಗೂರು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ, ಮುಖಂಡ ಪಿ.ವಿ. ರಾಜಗೋಪಾಲ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖ್ಯಾಡೆದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ನಾಯಕ, ಕೃಷಿ ಪ್ರಾಥಮಿಕ ಪತ್ತಿನ‌ ಸಹಕಾರಿ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮೇಶ‌ ನಾಯಕ, ಆರ್‌ಡಿಸಿಸಿ ನಿರ್ದೇಶಕ ಶರಣೆಗೌಡ ಪೊಲೀಸ ಪಾಟೀಲ, ಪ್ರಮುಖರಾದ ಬಸನಗೌಡ ಆದಾಪುರ, ಶಿವಯ್ಯ, ನಿಂಗಪ್ಪ ನಾಯಕ ಇದ್ದರು.

ಸಿ.‌ಮಹಾಲಕ್ಷ್ಮೀ ಸಂಗಡಿಗರಿಂದ ವಚನ ಗಾಯನ ನಡೆಯಿತು. ಬಾಣ ಬಿರುಸು ಪ್ರದರ್ಶನ ಆಕರ್ಷಣೆಗೊಂಡಿತು. ಕನಕಗಿರಿ ಸಮೀಪದ ನವಲಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.