ಕನಕಗಿರಿ: ‘ಗ್ರಾಮಗಳು ಹಸಿವಿನಿಂದ ತತ್ತರಿಸುತ್ತಿವೆ. ಕಾವ್ಯ ಗ್ರಾಮೀಣರ ನೋವಿಗೂ ಸ್ಪಂದಿಸಬೇಕು’ ಎಂದು ರಂಗಕರ್ಮಿ ಪ್ರಸನ್ನ ಸಲಹೆ ನೀಡಿದರು.
ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಗುರುವಾರ ಬೆಂಗಳೂರಿನಲ್ಲಿ ನಡೆದ ‘ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ‘ನಗರ ವಂಚಿತ ಸಮುದಾಯಗಳ ಮುಂದಿನ ಹೆಜ್ಜೆಗಳು’ ಕಾರ್ಯಕ್ರಮದಲ್ಲಿ ಇಲ್ಲಿನ ಸಾಹಿತಿ ಅಲ್ಲಾಗಿರಿರಾಜ ಅವರ ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ವೈ.ಜೆ.ರಾಜೇಂದ್ರ ಮಾತನಾಡಿ ‘ಕೃಷಿ ಕೂಲಿ ಕಾರ್ಮಿಕರು ಹಾಗೂ ರೈತರು ಸಂಕಟಕ್ಕೆ ಸಿಲುಕಿ ತುತ್ತು ಅನ್ನಕ್ಕಾಗಿ ನಗರಕ್ಕೆ ವಲಸೆ ಬರುತ್ತಿದ್ದಾರೆ. ಸಂಘಟನೆಗಳ ಜತೆಗೆ ಕವಿ ಕಾವ್ಯ ಕೂಡ ಬಡವರ ನೋವಿಗೆ ಸ್ಪಂದಿಸುವುದು ಅವಶ್ಯಕ’ ಎಂದು ಹೇಳಿದರು.
ಕವಿ ಅಲ್ಲಾಗಿರಿರಾಜ ಮಾತನಾಡಿ,‘ಈ ಕವಿತೆಗಳು ನನ್ನನ್ನು ಅತಿ ಹೆಚ್ಚು ಕಾಡಿವೆ. ಒಂದೊಂದು ಕವಿತೆ ಕೂಡ ಜನ ಸಾಮಾನ್ಯರ ಎದೆಯ ಹಾಡು, ಪಾಡಾಗಿದೆ’ ಎಂದರು.
ರಾಷ್ಟ್ರೀಯ ಕಾನೂನು ಶಾಲೆ ಪ್ರಾಧ್ಯಾಪಕ ಬಾಬು ಮ್ಯಾಥ್ಯೂ, ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ. ಸ್ಲಂ ಜಗತ್ತು ಪತ್ರಿಕೆ ಸಂಪಾದಕ ಅರುಳ್ ಶಲ್ವಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.