ಕುಷ್ಟಗಿ: ಇಲ್ಲಿಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ದಲ್ಲಿ ಒಟ್ಟು 1,473 ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಪರಿಹರಿಸಲಾಯಿತು.
ಅವುಗಳ ಪೈಕಿ ಹಿರಿಯ ಸಿವಿಲ್ ನ್ಯಾಯಾಲಯದ 102, ಪ್ರಧಾನ ಸಿವಿಲ್ ನ್ಯಾಯಾಲಯದ 529 ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಸೇರಿದ 806 ಪ್ರಕರಣಗಳು ಇತ್ಯರ್ಥಗೊಂಡವು.
ಮೂರೂ ನ್ಯಾಯಾಲಯಗಳಲ್ಲಿ ಬಾಕಿಯಿದ್ದ 7,999 ಪ್ರಕರಣಗಳ ಪೈಕಿ ಮೋಟಾರು ಅಪಘಾತ, ಚೆಕ್ ಅಮಾನ್ಯ, ವೈವಾಹಿಕ, ಜನನ, ರಾಜೀಯಾಗಬಲ್ಲ ಹಾಗೂ ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟು 2,180 ಪ್ರಕರಣಗಳನ್ನು ರಾಜಿಸಂಧಾನಕ್ಕೆ ಆಹ್ವಾನಿಸಲಾಗಿತ್ತು. ಒಟ್ಟು ₹ 2.99 ಕೋಟಿ ಪರಿಹಾರ ಕೊಡಿಸಲಾಯಿತು. ಬ್ಯಾಂಕ್ ವಸೂಲಾತಿಗೆ ಸಂಬಂಧಿಸಿದ 2 ಪ್ರಕರಣಗಳು ಇತ್ಯರ್ಥಗೊಂಡಿದ್ದು, ವಸೂಲಿಯಾದ ₹ 2.80 ಲಕ್ಷ ಹಣವನ್ನು ಸಂಬಂಧಿಸಿದ ಬ್ಯಾಂಕ್ಗಳಿಗೆ ಜಮೆ ಮಾಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಂಜುನಾಥ ಚೌವಲಗಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಸರ್ಕಾರಿ ವಕೀಲರಾದ ಇಂದಿರಾ ಸುಹಾಸಿನಿ, ಎಲ್.ರಾಯನಗೌಡ, ಪರಸಪ್ಪ ಗುಜಮಾಗಡಿ, ಕಾನೂನು ಸಮಿತಿ ಸಹಾಯಕ ಸುನಿಲಕುಮಾರ ಹಾಗೂ ಇತರೆ ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.