ADVERTISEMENT

ಮಾಚಿದೇವರು ವಚನಗಳ ರಕ್ಷಕರು: ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಸಜ್ಜನ್

ಜಿಲ್ಲೆಯ ವಿವಿಧೆಡೆ ಶರಣ ಮಾಚಿದೇವರ ಸ್ಮರಣೆ, ಭಾವಚಿತ್ರಕ್ಕೆ ಪೂಜೆ: ಕೊಡುಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 1:45 IST
Last Updated 2 ಫೆಬ್ರುವರಿ 2021, 1:45 IST
ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು
ಕನಕಗಿರಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು   

ಕನಕಗಿರಿ: ‘12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಶರಣರಾಗಿದ್ದ ಮಡಿವಾಳ ಮಾಚಿದೇವ ವಚನಗಳ ರಕ್ಷಕರಾಗಿದ್ದರು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಸಜ್ಜನ್ ಅಭಿಪ್ರಾಯಪಟ್ಟರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಡಿವಾಳ ಮಾಚಿದೇವರು ಮಡಿವಂತಿಕೆಗೆ ಮತ್ತೊಂದು ಹೆಸರಾಗಿದ್ದರು ಅವರ ನಡೆ, ನುಡಿ ಹಾಗೂ ಕಾಯಕ ನಿಷ್ಠೆ ಅನುಕರಣೀಯ’ ಎಂದು ಹೇಳಿದರು.

ADVERTISEMENT

ಮುಖ್ಯಾಧಿಕಾರಿ ಎಂ. ತಿರುಮಲಮ್ಮ, ಬಿಜೆಪಿ ಎಸ್‌.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಮಹ್ಮದ್ ಪಾಷಾ ಮುಲ್ಲಾರ, ಪ್ರಕಾಶ ಹಾದಿಮನಿ, ಶರಣಪ್ಪ ಕೋಲ್ಕಾರ್, ಪಾಮಣ್ಣ ಹಾಗೂ ಟಿ.ಜೆ. ವಿಜಯಕುಮಾರ ಇದ್ದರು.

ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಿಪ್ಪಣ್ಣ ಮಡಿವಾಳರ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಮೇಶರಡ್ಡಿ ಓಣಿಮನಿ ಹಾಗೂ ಅಮರೇಶ ಪಟ್ಟಣಶೆಟ್ಟಿ
ಇದ್ದರು.

‘ಶರಣರ ರಕ್ಷಕ’

ಹನುಮಸಾಗರ: ‘ಮಡಿವಾಳ ಮಾಚಿದೇವರು ವಚನ ಸಾಹಿತ್ಯದ ರಕ್ಷಕರಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿದ್ದು, ಕಲ್ಯಾಣದಲ್ಲಿ ಶರಣರ ವಿರುದ್ಧ ಎದ್ದ ದಂಗೆಯ ಸಮಯದಲ್ಲಿ ಹಲವಾರು ಶರಣರನ್ನು ರಕ್ಷಿಸಿದ್ದರು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಣ್ಣ ಅಗಸಿಮುಂದಿನ ಹೇಳಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಅವರು ಮಾತನಾಡಿದರು.

‘ಸಮಾನತೆ, ಜಾತಿಯತೆ ನಿರ್ಮೂಲನೆ, ಸ್ತ್ರೀ ಸ್ವಾತಂತ್ರ್ಯ ಹನ್ನೆರಡನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಮೂಲ ಉದ್ದೇಶವಾಗಿತ್ತು. ಅಂದಿನ ಸಾಮಾಜಿಕ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರು ವಚನ ಗ್ರಂಥಗಳನ್ನು ಸಂರಕ್ಷಿಸುವ ಮೂಲಕ ಶರಣರ ಗೌರವಕ್ಕೆ ಪಾತ್ರರಾಗಿದ್ದರು’
ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪ್ಪ ಕಂಪ್ಲಿ, ರಿಯಾಜ್ ಖಾಜಿ, ರಮೇಶ ಬಡಿಗೇರ, ಮರೇಗೌಡ ಬೋದೂರ, ಫಾರೂಕ್ ಡಲಾಯಿತ್ ಹಾಗೂ ಶ್ರೀಶೈಲ ಮೋಟಗಿ ಇದ್ದರು.

ಮಹಾ ಶರಣರಿಗೆ ಗೌರವ

ತಾವರಗೇರಾ: ಪಟ್ಟಣದ ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೋಮವಾರ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಜಯಂತಿ ಆಚರಿಸಲಾಯಿತು.

ಮುಖ್ಯಾಧಿಕಾರಿ ಶಂಕರ ಕಾಳೆ, ಶರಣಬಸವ ಸೈಂದರ್, ಶಾಮೂರ್ತಿ ಕಟ್ಟಿಮನಿ, ಸುವರ್ಣ,ಮರೇಶ ಹಾಗೂ ಶಾರದಾ ಇದ್ದರು.

ನಾಡ ಕಚೇರಿ: ಇಲ್ಲಿನ ನಾಡ ಕಚೇರಿಯಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ, ಪೂಜೆ ನೆರವೇರಿಸುವ ಮೂಲಕ ಜಯಂತಿ ಆಚರಿಸಲಾಯಿತು.

ನಾಡ ತಹಶೀಲ್ದಾರ್ ಮಂಜುಳಾ ಪತ್ತಾರ, ಸೂರ್ಯಕಾಂತ ನಾಯಕ್, ಸಮಾಜದ ಮುಖಂಡರು, ಸಿಬ್ಬಂದಿ ಇದ್ದರು. ಪಟ್ಟಣ ಮತ್ತು ಸುತ್ತಲಿನ ವಿವಿಧ ಶಾಲಾ ಕಾಲೇಜು , ಸರ್ಕಾರಿ ಕಚೇರಿಗಳಲ್ಲಿ ಮಡಿವಾಳ ಮಾಚಿದೇವರ ಜಯಂತಿಆಚರಿಸಲಾಯಿತು.

ಸರಳ ಆಚರಣೆ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ ಶರಣ ಮಡಿವಾಳ ಮಾಚಿದೇವ ಜಯಂತಿಯನ್ನು ಕೋವಿಡ್‌ ನಿಯಮಗಳ ಅನುಸಾರ ಸರಳ ರೀತಿಯಲ್ಲಿ ಆಚರಿಸಲಾಯಿತು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ್ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಮತ್ತು ಸದಸ್ಯರು, ಗ್ರೇಡ್‌–2 ತಹಶೀಲ್ದಾರ್ ಮುರಳೀಧರ, ಶಿರಸ್ತೆದಾರ ಸತೀಶ್‌, ಕಾಂಗ್ರೆಸ್‌ ಮುಖಂಡ ದೊಡ್ಡಬಸವನಗೌಡ ಬಯ್ಯಾಪುರ ಸೇರಿದಂತೆ ಅನೇಕ ಪ್ರಮುಖರು, ತಾಲ್ಲೂಕಿನ ವಿವಿಧ ಗ್ರಾಮಗಳ ಮಡಿವಾಳ ಸಮುದಾಯದ ಮುಖಂಡರು, ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅದೇ ರೀತಿ ಪುರಸಭೆ, ತಾಲ್ಲೂಕು ಪಂಚಾಯಿತಿ, ಎಪಿಎಂಸಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು.

ಬುತ್ತಿಬಸವೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.

ವಚನ ಸಾಹಿತ್ಯ ಕುರಿತು ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.