ADVERTISEMENT

ತುಂಗಭದ್ರಾ ಎಡದಂಡೆ ಮುಖ್ಯನಾಲೆ: ಒಳಮೈ ಭಾರಿ ಬಿರುಕು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:59 IST
Last Updated 23 ಫೆಬ್ರುವರಿ 2026, 6:59 IST
ಕಾರಟಗಿ ತಾಲ್ಲೂಕಿನ ಮೈಲಾಪುರ ಬಳಿ ತುಂಗಭದ್ರಾ ಎಡದಂಡೆ ಮುಖ್ಯನಾಲೆಯ ಬಲ ಭಾಗ ಬಿರುಕು ಬಿಟ್ಟಿರುವುದು
ಕಾರಟಗಿ ತಾಲ್ಲೂಕಿನ ಮೈಲಾಪುರ ಬಳಿ ತುಂಗಭದ್ರಾ ಎಡದಂಡೆ ಮುಖ್ಯನಾಲೆಯ ಬಲ ಭಾಗ ಬಿರುಕು ಬಿಟ್ಟಿರುವುದು   

ಕಾರಟಗಿ: ತುಂಗಭದ್ರಾ ಎಡದಂಡೆ ಮುಖ್ಯನಾಲೆಯ ಬಲ ಭಾಗದ ಒಳಮೈ ಮೇಲಿನಿಂದ ತಳದವರೆಗೆ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. 

ತಾಲ್ಲೂಕಿನ ಮೈಲಾಪುರ ಗ್ರಾಮದ ಬಳಿಯ ಮೈಲ್‌ 46ರ ಚೈನ್‌ 2411ರ ಬಳಿ ಮುಖ್ಯನಾಲೆ ಬಿರುಕು ಬಿಟ್ಟಿದೆ. ಕ್ರಸ್ಟ್‌ಗೇಟ್‌ ಅಳವಡಿಕೆ ಹಿನ್ನೆಲೆಯಲ್ಲಿ ಮುಖ್ಯನಾಲೆಯಲ್ಲಿ ನೀರು ಹರಿಯುವಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೆರೆಯಲ್ಲಿ ಸಂಗ್ರಹಿಸಲು ಮಾರ್ಚ್‌ ಮೊದಲ ಅಥವಾ ನಂತರದ ವಾರದಲ್ಲಿ ಮುಖ್ಯನಾಲೆಗೆ ನೀರು ಬಿಡುವ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯನಾಲೆಯ ಒಳಮೈ ದುರಸ್ತಿ ಮಾಡದೇ ನೀರು ಹರಿಸಿದರೆ ಮತ್ತಷ್ಟು ಅಪಾಯ ಎದುರಾಗಲಿದೆ ಎಂಬುದು ರೈತರ ಆತಂಕವಾಗಿದೆ.

ಸಹಾಯಕ ಎಂಜಿನೀಯರ್‌ ವಿರೂಪಾಕ್ಷ ಗುಡೂರು, ‘ಮಾರ್ಚ್‌ 19ರಂದು ನಾಲೆ ಬಿರುಕು ಬಿಟ್ಟ ವಿಷಯ ಗಮನಕ್ಕೆ ಬಂದಿದೆ. ಮರುದಿನ ಮುಖ್ಯನಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ವರದಿ ಸಲ್ಲಿಸಿರುವೆ. ನಾಲೆಗೆ ನೀರು ಬಿಡುವುದರೊಳಗೆ ತುರ್ತು ದುರಸ್ತಿ ಕೈಗೊಳ್ಳಬೇಕಿದೆ. ಹಿರಿಯ ಅಧಿಕಾರಿಗಳು ಮೇಲ್ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಎಂಜಿನೀಯರ್‌ ನಾಗಪ್ಪ ಪ್ರತಿಕ್ರಿಯಿಸಿ, ‘ನಾಲೆಯ ಸ್ಥಳ ನಂ.2 ಕಾಲುವೆ ಉಪ ವಿಭಾಗ ಕಚೇರಿ ವ್ಯಾಪ್ತಿಗೆ ಬರುವುದು. ಬಿರುಕು ಬಿಟ್ಟ ವಿಷಯ ಗಮನಕ್ಕೆ ಬಂದಿದ್ದು, ಹಿರಿಯ ಅಧಿಕಾರಿಗಳು ಕೈಗೊಳ್ಳುವ ತೀರ್ಮಾನದಂತೆ ಅವರೊಂದಿಗೆ ಬೆರೆತು ಕೆಲಸ ಮಾಡುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.