
ಪ್ರಜಾವಾಣಿ ವಾರ್ತೆ
ಕೊಪ್ಪಳ: ತಾಲ್ಲೂಕಿನ ಅಬ್ಬಿಗೇರಿ ಗ್ರಾಮದ ಮಾರುತೇಶ್ವರ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ಮಾರುತೇಶ್ವರ ಮೂರ್ತಿಗೆ ಮಹಾ ಪೂಜೆ, ವಿವಿಧ ಫಲಪುಷ್ಪಗಳಿಂದ ಅಲಂಕಾರ, ಮಹಾ ಮಂಗಳಾರತಿ, ತೀರ್ಥ ಪ್ರಸಾದೊಂದಿಗೆ ವಿಶೇಷ ಪೂಜೆ ಜರುಗಿತು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಬಳಿಕ ಸಂಜೆ ಮುಳ್ಳಿನ ಮೇಲೆ ಭಕ್ತರು ಹಾರುವ ಮೂಲಕ ಭಕ್ತಿಯಿಂದ ಸೇವೆ ಸಲ್ಲಿಸಿದರು.
ಮಾರುತೇಶ್ವರ ದೇವಸ್ಥಾನದ ಅರ್ಚಕರು ಅಗ್ನಿಕುಂಡದಲ್ಲಿ ನಡೆಯುವ ಮೂಲಕ ಹರಕೆ ತೀರಿಸಿದರು. ಬದಾಮಿ ತಾಲ್ಲೂಕಿನ ಲಕಮಾಪುರದ ಗ್ರಾಮದ ಎಫ್.ಎ. ಮುಲ್ಲಾ ವಿರಚಿತ ‘ಕುಡುಕ ಹಚ್ಚಿದ ಕುಂಕುಮ ಅರ್ಥಾತ್ ಯಾರ ತಾಳಿ ಯಾರ ಕೊರಳಿಗೆ’ ಎಂಬ ನಾಟಕ ಹಾಗೂ ರಸಮಂಜರಿ ಜರುಗಿತು.