ಕುಕನೂರು: ‘ಸ್ತ್ರೀಯರನ್ನು ಪೂಜಿಸಿ ಗೌರವಿಸುವ ಸಂಸ್ಕೃತಿಯನ್ನು ಹೊಂದಿರುವ ನಾಡು ನಮ್ಮದು. ಇಂಥ ಮಣ್ಣಿನಲ್ಲಿ ಜನಿಸಿ ಜಾತಿ–ಮತ ಎನ್ನದೆ, ಮಾನವ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ ಇಟಗಿ ಭೀಮಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಸಿದ್ದರಾಮನಂದಪುರಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಭಟಪ್ಪನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಭೀಮಾಂಬಿಕಾ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ತನ್ನ ಸ್ವಭಾವಗಳನ್ನು ಪರಿವರ್ತನೆ ಮಾಡಿಕೊಳ್ಳುವುದು ಮುಖ್ಯ. ಮೂಢನಂಬಿಕೆಗಳಿಗೆ ತಲೆಬಾಗಬಾರದು ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ,‘ಇತ್ತೀಚಿನ ದಿನಗಳಲ್ಲಿ ರಾಜಕೀಯ ಕಲುಷಿತಗೊಂಡು, ಕುಲಗೆಟ್ಟು ಹೋಗಿದೆ. ಅದನ್ನು ಯುವಪೀಳಿಗೆ ಮಾತ್ರ ಸರಿ ದಾರಿಗೆ ತರಲು ಸಾಧ್ಯ. ಆದ್ದರಿಂದ ಯುವಕರು ಸನ್ಮಾರ್ಗದಲ್ಲಿ ನಡೆದು ಸಮಾಜ ಸುಧಾರಿಸುವ ಕಾರ್ಯದಲ್ಲಿ ದಿಟ್ಟ ಹೆಜ್ಜೆ ಇಡಬೇಕಾಗಿದೆ’ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಎಚ್.ಡಿ.ಪಾಟೀಲರಿಗೆ ಪ್ರಶಸ್ತಿ ನೀಡಲಾಯಿತು.
ಬೆದವಟ್ಟಿಯ ಶಿವಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಳಗಾನೂರು ಶಿವಶಾಂತವೀರ ಶರಣರು, ಅನ್ನದಾನೇಶ್ವರ ಶಾಖಾಮಠದ ಮಹಾದೇವ ದೇವರು, ಚಿದಾನಂದ ಅಯ್ಯಸ್ವಾಮಿ ಗುರುವಿನವರು, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ದೊಡ್ಡನಗೌಡ ಪಾಟೀಲ, ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಶರಣು ತಳ್ಳಿಕೇರಿ, ಪ್ರಾಚಾರ್ಯ ಶಿವರಾಜ ಗುರಿಕಾರ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ದೊಡ್ಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.