ಗಂಗಾವತಿ: ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿಕಾರರಿಗೆ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಮಿಕರ ಸಂಘ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದೆ.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಕನಕರಾಯ ಮಾತನಾಡಿ,‘ಕಳೆದ ತಿಂಗಳು ನಾವು ತಾ.ಪಂ ಮುಂದೆ ಕೆಲಸಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡಿದ್ದೆವು. ಈ ವೇಳೆ ತಾ.ಪಂ ಅಧಿಕಾರಿಗಳು ಕೂಡ ಕೆಲಸ ನೀಡುವ ಭರವಸೆ ನೀಡಿದ್ದರು. ಆದರೆ, ಇಲ್ಲಿವರೆಗೂ ಅದು ಈಡೇರಿಲ್ಲ’ ಎಂದು ಹೇಳಿದರು.
ತಾಲ್ಲೂಕಿನ ಚಿಕ್ಕಜಂತಕಲ್, ಢಣಾಪುರ, ಹೇರೂರು, ವಡ್ಡರಹಟ್ಟಿ, ಸಣಾಪುರ, ಚಿಕ್ಕಬೆಣಕಲ್, ಯರಡೋಣಾ ಸೇರಿ ಹಲವು ಗ್ರಾಮಗಳ ಕೂಲಿಕಾರರೊಂದಿಗೆ ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ. ಉದ್ಯೋಗ ಖಾತ್ರಿ ಕೆಲಸ ನೀಡಬೇಕು. ಇಲ್ಲದಿದ್ದರೇ ಗುಳೆ ಹೋಗಲು ಅನುಮತಿ ಕೊಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಕೂಲಿಕಾರರಾದ ಹುಲಗಪ್ಪ, ತಿಮ್ಮಣ್ಣ, ಮುತ್ತಣ್ಣ, ಯಮನೂರ, ಶೇಖಮ್ಮ, ಗಂಗಮ್ಮ, ಬಸವರಾಜ, ಹನುಮೇಶ ಹಾಗೂ ಸೋಮಮ್ಮ ಸೇರಿದಂತೆ ವಿವಿಧ ಗ್ರಾಮದ ಕೂಲಿಕಾರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.