ADVERTISEMENT

ಮುಕ್ತ ವ್ಯಾಪಾರಕ್ಕೆ ಅನುಮೋದನೆ ನೀಡಬೇಡಿ

ರಾಬಾಕೊ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 14:10 IST
Last Updated 11 ಅಕ್ಟೋಬರ್ 2019, 14:10 IST
ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಅನುಮೋದನೆ ನೀಡಬಾರದು ಎಂದು ಒತ್ತಾಯಿಸಿ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು
ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಅನುಮೋದನೆ ನೀಡಬಾರದು ಎಂದು ಒತ್ತಾಯಿಸಿ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು   

ಕೊಪ್ಪಳ: ಅಂತರರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಅನುಮೋದನೆ ನೀಡಬಾರದು ಎಂದು ಒತ್ತಾಯಿಸಿ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ (ರಾಬಕೊ) ನೇತೃತ್ವದಲ್ಲಿ ಹಾಲು ಉತ್ಪಾದಕರು ನಗರದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಹೈನುಗಾರಿಕೆ ಉತ್ಪನ್ನಗಳ ಮೇಲಿನ ಆಮದು ತೆರಿಗೆಯನ್ನು ರದ್ದು ಪಡಿಸಬೇಕು ಎನ್ನುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿರುವುದಾಗಿ ಪತ್ರಿಕೆ ಹಾಗೂ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ವಿದೇಶಿ ಹೈನು ಉತ್ಪನ್ನಗಳ ಮೇಲೆ ಆಮದು ತೆರಿಗೆ ರದ್ದುಪಡಿಸಿ, ಮುಕ್ತ ವ್ಯಾಪಾರಕ್ಕೆ ಅನುಮತಿ ನೀಡಿದರೆ ಸ್ಥಳೀಯ ಜಿಲ್ಲೆಯಲ್ಲಿರುವ 230 ಹಾಲು ಉತ್ಪಾದಕರ ಸಂಘಗಳ: 25ಸಾವಿರ ರೈತ ಕುಟುಂಬಗಳಿಗೆ ತೊಂದರೆ ಉಂಟಾಗುತ್ತದೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆ ಬರಗಾಲ ಪ್ರದೇಶವಾಗಿದ್ದು, ಇಲ್ಲಿ ಹೈನುಗಾರಿಕೆ ಮುಖ್ಯ ಕಸುಬಾಗಿದೆ. ಪ್ರತಿನಿತ್ಯ ಹೊಸ 1 ಲಕ್ಷ ಲೀಟರ್‌ ಹಾಲನ್ನು ಉತ್ಪಾದನೆ ಮಾಡಿ, ಒಕ್ಕೂಟಕ್ಕೆ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ದಿನ ವಹಿ ₹ 28ಲಕ್ಷಗಳನ್ನು ಪಡೆದು, ವಾರ್ಷಿಕವಾಗಿ ಅಂದಾಜು ₹ 1.2 ಕೋಟಿ ಆದಾಯ ಪಡೆದು, ಜೀವನ ಸಾಗಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ ವ್ಯಾಪಾರ ಒಪ್ಪಂದ ಒಡಂಬಡಿಕೆಯಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ದೇಶಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಮ್ಮ ದೇಶಕ್ಕೆ ರಫ್ತು ಮಾಡಿದಲ್ಲಿ, ಜಿಲ್ಲೆಯಲ್ಲಿರುವ ರೈತರ ಉಪ ಜೀವನಕ್ಕೆ ಆಧಾರವಾಗಿರುವ ಹೈನುಗಾರಿಕೆ ಮೇಳೆ ತುಂಬಾ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ದೇಶಗಳಲ್ಲಿ ಇರುವ ವಿದೇಶಿ ತಳಿಗಳು ಹೆಚ್ಚಿನ ಹಾಲು ನೀಡುತ್ತಿವೆ. ಇದರಿಂದ ಅವರಿಗೆ ಉತ್ಪಾದನಾ ವೆಚ್ಚ ಕಡಿಮೆ ಆಗಿರುತ್ತದೆ. ನಮ್ಮ ದೇಶದಲ್ಲಿ ಇರುವ ತಳಿಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳ ತಳಿಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ನೀಡುತ್ತಿವೆ. ಅಂತರ ರಾಷ್ಟ್ರೀಯ ಹಾಲಿನ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಸಹಿ ಹಾಕಿದ್ದಲ್ಲಿ ಆಮುದು ತೆರಿಗೆ ರದ್ದಾಗುತ್ತದೆ. ಆದ್ದರಿಂದ ಸದರಿ ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಪೈಪೋಟಿ ನಡೆಸಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡರು.

ಇದರಿಂದನಮ್ಮ ದೇಶದ ಹೈನು ಉದ್ಯಮ ಪೂರ್ಣವಾಗಿ ಸ್ಥಬ್ಧವಾಗುತ್ತದೆ. ಇದರಿಂದ ಬರಪೀಡಿತ ಜಿಲ್ಲೆ ವ್ಯಾಪ್ತಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೈನು ಉದ್ಯಮದ ಮೇಲೆ ಅವಲಂಬಿತವಾದ 90 ಸಾವಿರ ಜನ ನಿರುದ್ಯೋಗಿಗಳಾಗುತ್ತಾರೆ. ಆದ್ದರಿಂದ ಅಂತರರಾಷ್ಟ್ರೀಯ ಹಾಲು ಮತ್ತು ಉತ್ಪನ್ನಗಳ ಮುಕ್ತ ವ್ಯಾಪರ ಒಪ್ಪಂದಕ್ಕೆ ಅನುಮೋದನೆ ನೀಡಬಾರದು ಎಂದು ಹಾಲು ಉತ್ಪಾದಕರು ಒತ್ತಾಯಿಸಿದರು.

ಬಳಿಕ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ ಅವರಿಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಉಪಾಧ್ಯಕ್ಷ ಶಿವಪ್ಪ ವಾದಿ, ನಿರ್ದೇಶಕರಾದ ವೆಂಕನಗೌಡ್ರು ಹಿರೇಗೌಡ್ರು, ಎಂ.ಸತ್ಯನಾರಾಯಣ, ಕವಿತಾ ಗುಳಗಣ್ಣನವರ, ಮಂಜುನಾಥ ನಿಡಶೇಸಿ, ನಾಗರಾಜ್ ಚಿಕ್ಕಮನ್ನಾಪುರ, ವೀರಪ್ಪ ರಾಜೂರ, ಗಂಗಾಧರ ಹಿರೇಮಠ, ಶರಣಯ್ಯ ದ್ಯಾಂಪುರ, ಪ್ರಕಾಶ ತಿಗರಿ, ವಿಶ್ವನಾಥ ಸಿದ್ಧಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.