ADVERTISEMENT

ಮೋದಿಯಿಂದ ದೇಶದಲ್ಲಿ ಅಭಿವೃದ್ಧಿ ಪರ್ವ

ಭಾಗ್ಯನಗರ ಮೇಲ್ಸೇತುವೆ ಉದ್ಘಾಟನೆ ವೇಳೆ ಸಂಸದ ಸಂಗಣ್ಣ ಕರಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 14:07 IST
Last Updated 2 ಮಾರ್ಚ್ 2019, 14:07 IST
ಸಂಸದ ಸಂಗಣ ಕರಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಾಬುಲಾಲ್ ಜೈನ್, ಸಿ.ವಿ.ಚಂದ್ರಶೇಖರ್‌, ಅಪ್ಪಣ್ಣ ಪದಕಿ, ರಾಘವೇಂದ್ರ ಪಾನಘಂಟಿ, ಮಾಜಿ ಶಾಸಕ ಜಿ.ವೀರಪ್ಪ, ರಮೇಶ ವೈದ್ಯ ಇದ್ದರು
ಸಂಸದ ಸಂಗಣ ಕರಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಾಬುಲಾಲ್ ಜೈನ್, ಸಿ.ವಿ.ಚಂದ್ರಶೇಖರ್‌, ಅಪ್ಪಣ್ಣ ಪದಕಿ, ರಾಘವೇಂದ್ರ ಪಾನಘಂಟಿ, ಮಾಜಿ ಶಾಸಕ ಜಿ.ವೀರಪ್ಪ, ರಮೇಶ ವೈದ್ಯ ಇದ್ದರು   

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಸಮೀಪದ ಭಾಗ್ಯನಗರ ರೈಲ್ವೆ ಮೇಲ್ಸೇತುವೆ-63 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ಅವರು, ಐದು ವರ್ಷಗಳ ಅವಧಿಯಲ್ಲಿ ಭೂ, ವಾಯು, ಜಲ ಮಾರ್ಗ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಇಚ್ಛಾಶಕ್ತಿಯಿಂದಲೇ ಈ ಭಾಗ್ಯನಗರ ಸೇತುವೆ ಕೂಡಾ ಪೂರ್ಣಗೊಂಡಿದೆ ಎಂದರು.

ಭಾಗ್ಯನಗರದ ಜನ ಶ್ರಮಜೀವಿಗಳು. 2010ರಿಂದ ನಗರಕ್ಕೆ ಬರಲು ತೊಂದರೆ ಅನುಭವಿಸುತ್ತಿದ್ದರು. ಗೂಡ್ಸ್ ರೈಲುಗಳು ಬಂದರೆ ತಾಸುಗಟ್ಟಲೆ ನಿಲ್ಲಬೇಕಿತ್ತು. ಆದರೆ ಈಗ ಯೋಜನೆ ಮುಗಿದಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಹಕಾರ ನೀಡಿದೆ ಎಂದು ಹೇಳಿದರು.

ADVERTISEMENT

‘ದೇಶದ ಜನ ಬದಲಾವಣೆ ಬಯಸಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಮೋದಿ ಅವರ ಜೊತೆ ನನ್ನನ್ನು ಗೆಲ್ಲಿಸಿದ್ದೀರಿ. ಜನಧನ್, ಆಯುಷ್ಮಾನ್ ಭಾರತ, ಕೃಷಿ ಸಿಂಚಾಯಿ, ಕಿಸಾನ್ ಸಮ್ಮಾನ್, ಅನಿಲ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಗೊಳಿಸುವ ಮೂಲಕ ಜನರು ನಿರೀಕ್ಷೆ ಮಾಡಿದ್ದ ಕೆಲಸವನ್ನು ಮಾಡಿದ ತೃಪ್ತಿ ಇದೆ‘ ಎಂದು ಹೇಳಿದರು.

ಶಾಸಕರ ವಿರುದ್ಧ ಅಸಮಾಧಾನ:

ಸ್ಥಳೀಯ ಶಾಸಕರಿಗೆ ಅಭಿವೃದ್ಧಿ ಬೇಕಿಲ್ಲ. ಕೊಪ್ಪಳಕ್ಕೆ ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಾಣ, ಕೊಪ್ಪಳ ಏತ ನೀರಾವರಿ, ಸಿಂಗಟಾಲೂರ ಯೋಜನೆ ಹಾಗೂ ನೂತನ ಕೇಂದ್ರ ಬಸ್ ನಿಲ್ದಾಣ ಆರಂಭಿಸಿದ್ದೇವೆ. ಈಗಿನ ಶಾಸಕರು ಭೂಮಿ ಪೂಜೆಯಲ್ಲಿಯೇ ಕಾಲ ಕಳೆದಿದ್ದಾರೆ. ಜನರ ಅಭಿಲಾಷೆಗೆ ಅನುಗುಣವಾಗಿ ಕೆಲಸ ಮಾಡಬೇಕು. ರಾಜಕೀಯ ಮಾಡಲು ಅಲ್ಲ. ಅಧಿಕಾರ ಶಾಶ್ವತ ಅಲ್ಲ ನಾವು ಮಾಡುವ ಅಭಿವೃದ್ಧಿ ಕಾರ್ಯ ಮಾತ್ರ ಶಾಶ್ವತ ಎಂದು ಪರೋಕ್ಷವಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರನ್ನು ಟೀಕಿಸಿದರು.

ಪ್ರಾಸ್ತಾವಿಕವಾಗಿಮಾತನಾಡಿದ ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ,ಭಾಗ್ಯನಗರದ ಜನರ ಬಹುದಿನದ ಕನಸು ನನಸಾಗಿದೆ.ಕಂದಾಯ ಗ್ರಾಮವನ್ನಾಗಿ ಮಾಡಲು ಸಂಸದರು, ಶಾಸಕರು ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.

ಭಾಗ್ಯನಗರದ ಜನರ ಅನುಕೂಲಕ್ಕೆ ಎರಡನೇ ರೈಲ್ವೆ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಬೇಕು. ಟಿಕೆಟ್ ಕೌಂಟರ್ ಆರಂಭಿಸಬೇಕು. ಸ್ಕೈವಾಕ್ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೇಖಮ್ಮ ದೇವರಮನಿ, ಮಾಜಿ ಶಾಸಕ ಜಿ.ವೀರಪ್ಪ, ಮಾಜಿ ಸಚಿವ ಅಗಡಿ, ಸಿ.ವಿ.ಚಂದ್ರಶೇಖರ, ರಮೇಶ್ ವೈದ್ಯ, ಬಾಬುಲಾಲ್ ಜೈನ್, ಈಶಣ್ಣ ಮಾದಿನೂರ, ಪೆದ್ದಸುಬ್ಬಯ್ಯ, ಅಪ್ಪಣ್ಣ ಪದಕಿ, ಸಿ.ವಿ.ಚಂದ್ರಶೇಖರ, ಪಟ್ಟಣ ಪಂಚಾಯಿತಿ ಸದಸ್ಯರು,ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.