ಕೊಪ್ಪಳ: ‘ನಗರಸಭೆ ವ್ಯಾಪ್ತಿಯ 16ನೇ ವಾರ್ಡ್ನಲ್ಲಿ ಅನೇಕ ಸಮಸ್ಯೆಗಳಿದ್ದು ಪೌರಾಯುಕ್ತ ಗಣಪತಿ ಪಾಟೀಲ ಹಾಗೂ ಎಇಇ ಮಧುರಾ ಅವರು ಪರಿಹರಿಸುತ್ತಿಲ್ಲ. ಅವರ ಭೇಟಿಗೆ ಅನೇಕ ಬಾರಿ ಪ್ರಯತ್ನಿಸಿದರೂ ಸಿಗುತ್ತಿಲ್ಲ. ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂದು ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ಆರೋಪಿಸಿದರು.
‘ಅಧಿಕಾರಿಗಳನ್ನು ಭೇಟಿಯಾಗಲು ನಗರಸಭೆಗೆ ಅನೇಕ ಬಾರಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಸದಸ್ಯನಾಗಿರುವ ನನಗೇ ಈ ಪರಿಸ್ಥಿತಿಯಾದರೆ ಜನಸಾಮಾನ್ಯರ ಪಾಡೇನು? ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
‘ನಗರಸಭೆಯಲ್ಲಿ ಪೌರಾಯುಕ್ತರು ಎಲ್ಲಿ ಎಂದು ಪ್ರಶ್ನಿಸಿದಾಗ ಸ್ಥಳ ಪರಿಶೀಲನೆಗೆ ತೆರಳಿದ್ದಾರೆ. ಸಭೆಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಫೋನ್ ಮಾಡಿದರೂ ವಾಪಸ್ ಕರೆ ಮಾಡುವ ಸೌಜನ್ಯವನ್ನೂ ಅವರು ತೋರಿಸುತ್ತಿಲ್ಲ. ನಮ್ಮ ವಾರ್ಡ್ನಲ್ಲಿ ಶೌಚಾಲಯ ನಿರ್ವಹಣೆ, ಚರಂಡಿ ಸ್ವಚ್ಛತೆ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳು ಬಾಕಿ ಉಳಿದಿವೆ’ ಎಂದು ದೂರಿದರು.
ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೂ ಸೋಮಣ್ಣ ಹಳ್ಳಿ ಸೋಮವಾರ ದೂರು ಸಲ್ಲಿಸಿದ್ದಾರೆ. ಸ್ಥಳೀಯರಾದ ಚನ್ನಬಸಪ್ಪ ಗಾಳಿ, ಮಂಜುನಾಥ ಗುದಿಗಿ ಹಾಗೂ ಮಂಜುನಾಥ ಹಾಲದಮನಿ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.