ಯಲಬುರ್ಗಾ: ‘ಜನರಿಗೆ ಸುಲಭವಾಗಿ ಮರಗಳು ದೊರೆಯಲಿ ಎನ್ನುವ ಉದ್ದೇಶದಿಂದ ಸರ್ಕಾರ ಹೊಸ ಮರಳು ನೀತಿ ತಂದಿದೆ. ಅದನ್ನು ಅನುಸರಿಸಿ ಮರಳು ಪಡೆದುಕೊಳ್ಳಬೇಕು’ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.
ಪಟ್ಟಣದ ಡಾ.ಬಾಬು ಜಗಜೀವನ್ ರಾಂ ಭವನದಲ್ಲಿ ಶನಿವಾರ ನಡೆದ ಟ್ರ್ಯಾಕ್ಟರ್ ಮಾಲೀಕರ ಸಭೆಯಲ್ಲಿ ಮಾತನಾಡಿದರು.
‘ಮರಳು ಅಕ್ರಮ ಸಾಗಣೆ ತಡೆಗೆ ಸರ್ಕಾರ ಹೊಸ ನೀತಿ ಜಾರಿಗೆ ತಂದಿದೆ. ಬೆಳಿಗ್ಗೆ 6 ರಿಂದ ಸಂಜೆ 6 ವರಗೆ ಮಾತ್ರ ಮರಳು ಪಡೆಯಲು ಅವಕಾಶ ಇದೆ. ಆಯಾ ಪ್ರದೇಶ ವ್ಯಾಪ್ತಿಯ ಕಚೇರಿಯಲ್ಲಿ ರಸೀದಿ ಪಡೆದುಕೊಳ್ಳುವುದು ಕಡ್ಡಾಯ’ ಎಂದರು.
ಪಿಎಸ್ಐ ಶಿವಕುಮಾರ ಮುಗ್ಗಳ್ಳಿ ಮಾತನಾಡಿ,‘ಮರಳು ಅಕ್ರಮ ಸಾಗಣೆಗೆ ಸರ್ಕಾರ ಕಡಿವಾಣ ಹಾಕಿದೆ. ಹೊಸ ನೀತಿಯಿಂದ ಸುಲಭವಾಗಿ ಮರಳು ಪಡೆಯಲು ಸಾಧ್ಯವಾಗಲಿದೆ. ಹೊಸ ನೀತಿ ಉಲ್ಲಂಘನೆ ಮಾಡಿ ಮರಳು ಸಂಗ್ರಹಕ್ಕೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಹೊಸ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದರು.
ಯಾವುದೇ ಕಾರಣಕ್ಕೂ ರಾತ್ರಿ ಸಮಯದಲ್ಲಿ ಮರಳು ಸಾಗಣೆ ಹಾಗೂ ಸಂಗ್ರಹಕ್ಕೆ ಅವಕಾಶವಿರುವುದಿಲ್ಲ . ಇದರ ಮೇಲೆ ನಿಗಾವಹಿಸಲಾಗುವುದು ಎಂದು
ಹೇಳಿದರು.
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮುತ್ತಪ್ಪ, ಪ.ಪಂ. ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ ಭಾವಿಮನಿ ಹಾಗೂ ಮುಧೋಳ ಪಿಡಿಒ ಫಕ್ಕಿರಪ್ಪ ಕಟ್ಟಿಮನಿ
ಮಾತನಾಡಿದರು.
ಮುಖಂಡರಾದ ದೊಡ್ಡಯ್ಯ ಗುರುವಿನ, ಶಂಕರ ಭಾವಿಮನಿ ಹಾಗೂ ಈರಪ್ಪ ಬಣಕಾರ ಅವರು ಈ ವೇಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.