ನಿಂಗಪ್ಪ ಸವಣೂರ
ಗಂಗಾವತಿ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹನ್ನೂರ ಗ್ರಾಮದ ನಿಂಗಪ್ಪ ಸವಣೂರ ಎನ್ನುವ 61 ವರ್ಷದ ವ್ಯಕ್ತಿ 102 ಕೆ.ಜಿ. ತೂಕದ ಜೋಳದ ಮೂಟೆ ಬೆನ್ನ ಮೇಲೆ ಹೊತ್ತು ಮಂಗಳವಾರ 575 ಮೆಟ್ಟಿಲುಗಳು ಇರುವ ತಾಲ್ಲೂಕಿನ ಅಂಜನಾದ್ರಿಯ ಬೆಟ್ಟವನ್ನು ಏರಿದ್ದಾರೆ.
ಬೆಟ್ಟದ ಕೆಳಭಾಗದಲ್ಲಿರುವ ಪಾದಗಟ್ಟೆಗೆ ನಮಸ್ಕರಿಸಿ ಮೂಟೆ ಹೊತ್ತ ನಿಂಗಪ್ಪ ಎಲ್ಲಿಯೂ ನಿಲ್ಲದೇ ಒಂದು ತಾಸು ಎರಡು ನಿಮಿಷದಲ್ಲಿ ಶ್ರೀರಾಮ ಹಾಗೂ ಹನುಮನ ಸ್ಮರಣೆ ಮಾಡುತ್ತ ಬೆಟ್ಟ ಏರಿದರು. ನಂತರ ಜೋಳವನ್ನು ದೇವಸ್ಥಾನಕ್ಕೆ ಅರ್ಪಿಸಿ ದರ್ಶನ ಪಡೆದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ನಿಂಗಪ್ಪ ‘ಹಿಂದೆ ಶ್ರೀಶೈಲದಿಂದ ಆಂಜನಾದ್ರಿಗೆ ಬಂದಾಗ ಜೋಳದ ಮೂಟೆ ಹೊತ್ತು ಮುಂದೊಂದು ದಿನ ಬೆಟ್ಟ ಏರುವುದಾಗಿ ಹರಕೆ ಕಟ್ಟಿಕೊಂಡಿದ್ದೆ. ಈಗ ಆ ಬೇಡಿಕೆ ಈಡೇರಿದೆ. ದೇವರು ಆರೋಗ್ಯ ಚೆನ್ನಾಗಿ ಇಟ್ಟಿರುವುದರಿಂದಲೇ ಬೆಟ್ಟ ಏರಲು ಸಾಧ್ಯವಾಗಿದೆ’ ಎಂದು ಸಂತೋಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.