ಕೊಪ್ಪಳ: ‘ಸರ್ಕಾರಿ ಜಾಗ ಕಬಳಿಸಿ ವೈಯಕ್ತಿಕ ಮನೆ, ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಂತಹವುಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು’ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದ ತಾ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ತಾ.ಪಂ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಅಧಿಕಾರಿಗಳು ಕ್ರಿಯಾಶೀಲರಾಗಿ ಮಾಹಿತಿ ನೀಡಬೇಕು. ಇಲ್ಲವಾದರೆ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
‘ತಾಲ್ಲೂಕಿನಲ್ಲಿ 87 ಹಾಲು ಉತ್ಪಾದಕ ಸಂಘಗಳಿವೆ. ಗ್ರಾಮಕ್ಕೊಂದರಂತೆ ಕನಿಷ್ಠ 100 ಸಂಘ ರಚಿಸಬೇಕು. ಎಲ್ಲ ಯೋಜನೆಗೆ ಅರ್ಜಿ ಪಡೆದು ಸಲ್ಲಿಸಬೇಕು. ನಂದಿನಿ ಪಾರ್ಲರ್ಗೆ ಜಾಗ ಗುರುತಿಸಬೇಕು. ತಾಲ್ಲೂಕಿನ ಎಲ್ಲ ವಸತಿ ನಿಲಯಗಳಲ್ಲಿ ಆಹಾರ ಗುಣಮಟ್ಟ ಕಾಪಾಡಿಕೊಳ್ಳಬೇಕು. ತೊಂದರೆ ಬಾರದಂತೆ ಅಧಿಕಾರಿಗಳು ಕ್ರಮ ಜರುಗಿಸಬೇಕು’ ಎಂದು ಹೇಳಿದರು.
ಎಸಿ ಕ್ಯಾ. ಮಹೇಶ ಮಾಲಗಿತ್ತಿ ಮಾತನಾಡಿ, ‘ಉಪಗ್ರಾಮ, ಕಂದಾಯ ಗ್ರಾಮಕ್ಕೆ ಆಸಕ್ತಿ ತೋರಿಸಿದರೆ, ಕೆಲಸದ ಭಾರ ಹೆಚ್ಚಲಿದೆ ಎಂಬ ಕಾರಣಕ್ಕೆಪಿಡಿಒಗಳು ತಲೆಕಡೆಸಿಕೊಳ್ಳುತ್ತಿಲ್ಲ. ಇದನ್ನು ಬಿಟ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ತಹಶೀಲ್ದಾರ್ ವಿಠ್ಠಲ ಚೌಗಲಾ, ತಾ.ಪಂ ಇಒ ದುಂಡಪ್ಪ ತುರಾದಿ, ಕೆಡಿಪಿ ಸದಸ್ಯರಾದ ಯಲ್ಲನಗೌಡ, ನಾಗರಾಜ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.