ಕಾರಟಗಿ: ‘ಆಪರೇಷನ್ ಸಿಂಧೂರವನ್ನು ನಾವು ಬೆಂಬಲಿಸುತ್ತೇವೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಿ ಇಲ್ಲ. ಉಗ್ರಗಾಮಿಗಳು ಹಾಗೂ ಪಾಕಿಸ್ತಾನಕ್ಕೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಆಪರೇಷನ್ ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ ನಾಶ ಮಾಡಿರುವ ಭಾರತೀಯ ಸೇನೆಯ ಯೋಧರನ್ನು ಅಭಿನಂದಿಸುವೆ. ಉಗ್ರಗಾಮಿಗಳು ಹಾಗೂ ಅವರಿಗೆ ಆಶ್ರಯ, ನೆರವು ನೀಡಿ ಭಾರತದ ವಿರುದ್ಧ ಛೂ ಬಿಡುತ್ತಿದ್ದ ಪಾಕಿಸ್ತಾನಕ್ಕೂ ಇದೊಂದು ಎಚ್ಚರಿಕೆಯ ಸಂದೇಶ’ ಎಂದರು.
‘ಕಾನೂನಿಗಿಂತ ಯಾರೂ ದೊಡ್ಡವರಲ್ಲ’: ಗಣಿ ಅಕ್ರಮ, ಲೂಟಿ ಹಿನ್ನೆಲೆಯಲ್ಲಿ ಸಿಬಿಐ ಕೋರ್ಟ್ನಿಂದ ಮರು ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂಬ ಸಂದೇಶ ಪುನರಾವರ್ತನೆಯಾಗಿದೆ’ ಎಂದು ಹೇಳಿದರು.
ರಿಪಬ್ಲಿಕ್ ಬಳ್ಳಾರಿ ಸೃಷ್ಟಿ ಖ್ಯಾತಿಯ ರೆಡ್ಡಿ ಪರ್ಯಾಯ ಸರ್ಕಾರವನ್ನೇ ನಡೆಸುವ ಮಟ್ಟಿಗೆ ಸರ್ವಾಧಿಕಾರತನ ಪ್ರದರ್ಶಿಸಿದ್ದರು. ಆ ವ್ಯಕ್ತಿಗೆ ಈ ನೆಲದ ಕಾನೂನು ಹಾಗೂ ಸಂವಿಧಾನ ಎಲ್ಲರಿಗಿಂತಲೂ ಮಿಗಿಲು ಎನ್ನುವುದನ್ನು ಪುನರ್ ಸಾಬೀತುಪಡಿಸಿದಂತಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.