ಕನಕಗಿರಿ (ಕೊಪ್ಪಳ ಜಿಲ್ಲೆ): ಹೆತ್ತ ತಂದೆ- ತಾಯಿಯನ್ನು ಮಗನೊಬ್ಬ ಕೊಂದು ಹಾಕಿದ ಹೃದಯ ವಿದ್ರಾವಕ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಮೃತಪಟ್ಟವರು ಇಲ್ಲಿನ ಒಂಬತ್ತನೇ ವಾರ್ಡ್ ನಿವಾಸಿ ಗಿರಿಯಪ್ಪ ಮಡಿವಾಳರ(58), ಅಕ್ಕಮ್ಮ ಮಡಿವಾಳರ(49) ಎಂದು ತಿಳಿದಿದೆ. ಕೊಲೆ ಮಾಡಿದ ರಮೇಶ ಮಡಿವಾಳರ ಈಗ ಪೊಲೀಸರ ವಶದಲ್ಲಿದ್ದಾನೆ.
‘ತವರು ಮನೆಗೆ ಹೋಗಿದ್ದ ತನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಬರುವ ವಿಚಾರದಲ್ಲಿ ತಂದೆ ಹಾಗೂ ಮಗನ ಮಧ್ಯೆ ಮನಸ್ತಾಪ ಉಂಟಾಗಿ ಮಗ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಇಡೀ ರಾತ್ರಿ ಪಾಲಕರು ಹಾಗೂ ಮಗ ಜಗಳವಾಡಿದ್ದು ನಸುಕಿನ ಜಾವ. ಮನೆಯಲ್ಲಿ ಖಾರಾಕುಟ್ಟುವ ಹಾರಿಯಿಂದ ಮೊದಲಿಗೆ ತಂದೆಗೆ ಹೊಡೆಯಲು ಹೋದ, ಆಗ ಬಿಡಿಸಿಕೊಳ್ಳಲು ಬಂದ ತಾಯಿಗೆ ಹೊಡೆದ. ತಾಯಿ ಸ್ಥಳದಲ್ಲಿಯೇ ಕುಸಿದು ಸಾವನ್ನಪ್ಪಿದ್ದಾಳೆ ಆ ನಂತರ ಮಗ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ ತಂದೆಯ ಕಿರುಚಾಟ ಕೇಳಿದ ನೆರೆಹೊರೆಯ ಜನ ನೋಡಲು ಬಂದಾಗ ತಂದೆ ಪ್ರಜ್ಞಾ ಹೀನ ಸ್ಥಿತಿಯನ್ನು ಕಂಡು ನಮಗೆ ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕೊಪ್ಪಳದ ರಸ್ತೆಯಲ್ಲಿ ತಂದೆ ಸಹ ಸಾವನ್ನಪ್ಪಿದ್ದಾನೆ. ತಂದೆ–ತಾಯಿ ಕೊಲೆಗೀಡಾದ ಘಟನೆಯಿಂದ ಪಟ್ಟಣ ದ ಜನ ಬೆಚ್ಚಿ ಬಿದ್ದಿದ್ದು ಮೃತರ ಮನೆಗೆ ಬಂದು ಕಣ್ಣೀರು ಹಾಕಿದರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.