ADVERTISEMENT

156 ಪದವೀಧರರು ಪೊಲೀಸ್‌ ಸೇವೆಗೆ

ಎಂಜಿನಿಯರಿಂಗ್, ಎಂಬಿಎ ಅಭ್ಯರ್ಥಿಗಳೇ ಹೆಚ್ಚು

ಸಿದ್ದನಗೌಡ ಪಾಟೀಲ
Published 25 ಅಕ್ಟೋಬರ್ 2019, 14:17 IST
Last Updated 25 ಅಕ್ಟೋಬರ್ 2019, 14:17 IST
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಸಮೀಪದ ಹೊಸಳ್ಳಿಯಲ್ಲಿರುವ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಶುಕ್ರವಾರ ನಡೆದ 21ನೇ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳ ಕವಾಯತು ಆಕರ್ಷಕವಾಗಿತ್ತು
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಸಮೀಪದ ಹೊಸಳ್ಳಿಯಲ್ಲಿರುವ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಶುಕ್ರವಾರ ನಡೆದ 21ನೇ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳ ಕವಾಯತು ಆಕರ್ಷಕವಾಗಿತ್ತು   

ಕೊಪ್ಪಳ: ಸಮೀಪದ ಮುನಿರಾಬಾದಿನ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಶುಕ್ರವಾರ ನಡೆದ 21ನೇ ಪೊಲೀಸ್‌ ತಂಡದ ನಿರ್ಗಮನ ಪಥ ಸಂಚಲನ ಗಮನ ಸೆಳೆಯಿತು.

ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ ಪೊಲೀಸ್‌ ನೌಕರಿಗೆ ಸ್ನಾತಕೋತ್ತರ ಪದವೀಧರರು, ಪದವೀಧರರು, ವಾಣಿಜ್ಯಮ ವ್ಯವಹಾರ ಮತ್ತು ಎಂಜಿನಿಯರಿಂಗ್ ಸೇರಿದಂತೆ ವಿವಿಧ ತಾಂತ್ರಿಕ ಪದವಿ ಪಡೆದ ಅಭ್ಯರ್ಥಿಗಳು ಪೊಲೀಸ್‌ರಾಗಿ ಪ್ರಮಾಣ ವಚನ ಸ್ವೀಕರಿಸಿ ಸೇವೆಗೆ ಸನ್ನದ್ಧರಾಗಿರುವುದು ವಿಶೇಷವಾಗಿತ್ತು.

ಉನ್ನತ ಅಧ್ಯಯನ ಕೈಗೊಂಡಿದ್ದರೂ ಸರ್ಕಾರಿ ಕೆಲಸಕ್ಕೆ ಆಸಕ್ತಿ ತೋರಿ ಪೊಲೀಸ್‌ ಹುದ್ದೆಗೆ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳು 9 ತಿಂಗಳ ಕಠಿಣ ತರಬೇತಿ ಪಡೆದು,ಅಧಿಕೃತವಾಗಿ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದರು.

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಎಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿರುವುದರಿಂದ 'ಜನಸ್ನೇಹಿ ಪೊಲೀಸ್‌ ರೂಪಿಸಲು ಸಹಕಾರಿಯಾಗಿದೆ' ಎಂದು ಮುಖ್ಯ ಅತಿಥಿಯಾಗಿ ಬಂದಿದ್ದಕೆಎಸ್ಆರ್‌ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ಅವರ ಅಭಿಮತವಾಗಿತ್ತು.

ಪಥಸಂಚನ ವೀಕ್ಷಣೆಗೆ ಬಂದಿದ್ದ ಪ್ರಶಿಕ್ಷಣಾರ್ಥಿಗಳ ತಾಯಿ, ತಂದೆ, ಸಂಬಂಧಿಕರು ಸಾಧಕ ಮಕ್ಕಳನ್ನು ತಬ್ಬಿಕೊಂಡು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ನಂತರ ಸಮೀಪದ ಧಾರ್ಮಿಕ ಪ್ರವಾಸಿ ತಾಣಗಳಿಗೆ ತೆರಳಿ ವೀಕ್ಷಣೆ ಮಾಡಿದರು.

ಹೊರಾಂಗಣಕ್ರೀಡೆಯಲ್ಲಿ ಅನಿಲ್ ಎಂ.ಬಿ. ಪ್ರಥಮ, ಚಿಕ್ಕಸ್ವಾಮಿ ದ್ವಿತೀಯ, ಒಳಾಂಗಣ ಕ್ರೀಡೆ ಮತ್ತೀತರ ಚಟುವಟಿಕೆಯಲ್ಲಿಸೋಮಶೇಖರ ಪ್ರಥಮ, ಮಹೇಶ ದ್ವಿತೀಯ. ಗುಂಡುಹಾರಿಸುವ ಸ್ಪರ್ಧೆಯಲ್ಲಿ ಚೇತನ ಲಿಗಾಡೆ ಪ್ರಥಮ, ರಾಜು ನಾಗಠಾಣ ದ್ವಿತೀಯ ಸ್ಥಾನ ಪಡೆದರು.

ವಿಜಯ್.ಎ.ಬಿ.ಗೆ ಸರ್ವಶ್ರೇಷ್ಠ ಬಹುಮಾನ, ಅಮರೇಶ ಬಿ ಎಲ್ಲ ವಿಭಾಗದಲ್ಲಿ ಚಾಂಪಿಯನ್ ಆದರು. ಅವರಿಗೆ ವಿಶೇಷ ಟ್ರೋಫಿ ನೀಡಿ ಗೌರವಿಸಲಾಯಿತು.

ತರಬೇತಿ ಶಾಲೆ ಪ್ರಾಚಾರ್ಯ ಡಾ.ರಾಮಕೃಷ್ಣ ಮುದ್ದೇಪಾಲ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ರಾಜ್ಯ ಮೀಸಲು ಪೊಲೀಸ್ ಆರಕ್ಷಕ ಮಹಾನಿರೀಕ್ಷಕ ಪಿ.ಹರಿಶೇಖರನ್, ಬೆಳಗಾವಿ ತರಬೇತಿ ಶಾಲೆಯ ರಮೇಶ ಬೇರಗಾವಿಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.