ಕೊಪ್ಪಳ: ಕುಷ್ಟಗಿ ತಾಲ್ಲೂಕಿನ ಹನಮಸಾಗರ ಸಮೀಪದ ಮಿಯಾಪುರದಲ್ಲಿ ಪರಿಶಿಷ್ಟ ಸಮುದಾಯದಚನ್ನದಾಸರ ಪಂಗಡಕ್ಕೆ ಸೇರಿದ ಎರಡು ವರ್ಷದ ಮಗು ಆಂಜನೇಯ ದೇವಾಲಯ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
‘ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನೀಡಿದ ದೂರಿನ ಅನ್ವಯ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ದೇವಸ್ಥಾನದ ಅರ್ಚಕ ಕರಕಪ್ಪ ಪೂಜಾರಿ, ಹನುಮಗೌಡ, ಗವಿಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ ಮತ್ತು ಶರಣಗೌಡ ಎಂಬುವವರನ್ನು ಬಂಧಿಸಿ ಬುಧವಾರ ನ್ಯಾಯಾಂಗ ವಶಕ್ಕೆ ನೀಡಲಾಗಿದೆ’ ಎಂದುಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ ತಿಳಿಸಿದರು.
ವಿವಿಧ ದಲಿತ, ಪ್ರಗತಿಪರ ಸಂಘಟನೆಗಳವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರದ ನಿರ್ದೇಶನದ ಮೇರೆಗೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಎಸ್ಪಿ, ಡಿಸಿ ಭೇಟಿ:ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಬುಧವಾರ ಗ್ರಾಮಕ್ಕೆ ತೆರಳಿ ಸಂತ್ರಸ್ತ ಕುಟುಂಬದವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
‘ಪರಿಶಿಷ್ಟ ಜನಾಂಗಕ್ಕೆ ಸೇರಿದವ್ಯಕ್ತಿಯೊಬ್ಬರು ತಮ್ಮಜನ್ಮದಿನದ ಪ್ರಯುಕ್ತ ಪೂಜೆ ಮಾಡಿಸಲು ಗ್ರಾಮದ ದೇವಸ್ಥಾನಕ್ಕೆಹೋಗಿದ್ದರು. ಮಳೆ ಬಂದ ಕಾರಣ ಮಗು ದೇವಾಲಯದ ಒಳಗೆ ಹೋಗಿತ್ತು. ತಕ್ಷಣ ಮಗುವಿನ ತಂದೆ ಒಳಗೆ ಹೋಗಿ ಮಗುವನ್ನು ಕರೆದುಕೊಂಡು ಬಂದಿದ್ದರು. ಇದನ್ನು ನೋಡಿದ ದೇವಸ್ಥಾನದ ಅರ್ಚಕ ಮತ್ತು ಗ್ರಾಮದ ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.ಗ್ರಾಮದ ಮುಖಂಡರು ಸಭೆ ಸೇರಿ ದೇವಸ್ಥಾನ ಅಪವಿತ್ರವಾಗಿದೆ, ಶುದ್ಧೀಕರಣಕ್ಕೆ ದಂಡ ಪಾವತಿಸುವಂತೆ ಸೂಚಿಸಿದ್ದರು’ಎಂದು ಎಸ್ಪಿ ಟಿ.ಶ್ರೀಧರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.