ಕುಷ್ಟಗಿ: ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೆಡಿಎಸ್ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಎಂ.ಸಿದ್ದೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ತಾಲ್ಲೂಕು ಘಕಟದ ಅಧ್ಯಕ್ಷ ಬಸವರಾಜ ನಾಯಕ,‘ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಅಗತ್ಯವಸ್ತುಗಳ ಬೆಲೆಯಲ್ಲಿಯೂ ಬಹಳಷ್ಟು ಹೆಚ್ಚಳವಾಗಿ ಬಡವರು, ಜನಸಾಮಾನ್ಯರು, ರೈತರು ತತ್ತರಿಸಿದ್ದಾರೆ. ಕೋವಿಡ್ ಲಾಕ್ಡೌನ್ ಜಾರಿಯಿಂದಾಗಿ ಮೊದಲೇ ತೊಂದರೆಯಲ್ಲಿರುವ ಜನರಿಗೆ ಈಗ ಬೆಲೆ ಏರಿಕೆಯ ಬಿಸಿ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ವಿದ್ಯುತ್ ದರ ಏರಿಕೆ ಬಡವರ ಹೊಟ್ಟೆಯ ಮೇಲೆ ಬರೆ ಎಳೆದಿದೆ’ ಎಂದು ಅವರು ದೂರಿದರು.
ಕೋವಿಡ್ ಕಾರಣದಿಂದ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬಗಳಿಗೆ ಹೆಚ್ಚಿನ ಪರಿಹಾರಧನ ವಿತರಿಸಬೇಕು. ರಸಗೊಬ್ಬರದ ಮೇಲಿನ ಸಹಾಯಧನ ಹೆಚ್ಚಿಸುವ ಮೂಲಕ ರೈತರ ಮೇಲಿನ ಆರ್ಥಿಕ ಹೊರೆ ಇಳಿಸಬೇಕು. ವಿದ್ಯುತ್, ಪೆಟ್ರೋಲ್ ದರಗಳನ್ನು ಕೂಡಲೇ ಇಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪಕ್ಷದ ಅನೇಕ ಪ್ರಮುಖರು, ಕಾರ್ಯಕರ್ತರು, ರೈತರು ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.