ಕನಕಗಿರಿ: ಆರು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿ ಕೃಷಿ, ಉದ್ಯಮದಿಂದ ನಿರಾಶಗೊಂಡಿದ್ದ ಈ ಭಾಗದ ಜನರ ಮೊಗದಲ್ಲಿ ಈ ಸಲದ ದೀಪಾವಳಿ ಹಬ್ಬ ಕೋವಿಡ್-19 ಮಧ್ಯೆಯೂ ಮಂದಹಾಸ ಮೂಡಿಸಿದೆ.
ಸತತವಾಗಿ ಸುರಿದ ಮಳೆಯಿಂದ ರೈತರು, ವಿವಿಧ ವರ್ತಕರು ಸಂತಸಗೊಂಡಿದ್ದಾರೆ. ಲಕ್ಷ್ಮೀ ಪೂಜೆ ಮಾಡಲು ಬೇಕಾದ ಹೂವು, ಹಣ್ಣು, ಇತರೆ ಪೂಜಾ ಸಾಮಗ್ರಿಗಳನ್ನು ಭರ್ಜರಿಯಾಗಿ ಖರೀದಿಸಿದರು.
ರಾಜಬೀದಿ, ವಾಲ್ಮೀಕಿ ವೃತ್ತ, ಬಸ್ ನಿಲ್ದಾಣ ಪರಿಸರದಲ್ಲಿ ವಿವಿಧ ನಮೂನೆಯ ಹಣ್ಣು, ಹೂವಿನ ಹಾರ, ಅಡಿಕೆ ಹೂವು, ಚೆಂಡು ಹೂ, ಮಾವಿನಕಾಯಿ ಎಲೆ, ಇತರೆ ಸಾಮಾಗ್ರಿಗಳನ್ನು ದುಬಾರಿ ಬೆಲೆ ಇದ್ದರೂ ಸಂಜೆ ತನಕ ಖರೀದಿ ವ್ಯಾಪಾರ ಜೋರಾಗಿತ್ತು.
ಟ್ಯ್ರಾಕ್ಟರ್, ಲಾರಿ, ಮಿನಿ ಬಸ್, ಕಾರು ಇತರೆ ವಾಹನಗಳ ಮಾಲೀಕರು, ಚಾಲಕರು ತಮ್ಮ ವಾಹನಗಳನ್ನು ಹೂವು, ಬಾಳೆಗೊನೆಗಳಿಂದ ಅಲಂಕಾರಗೊಳಿಸಿ ಕನಕಾಚಲಪತಿ ದೇವಸ್ಥಾನ ಸೇರಿದಂತೆ ಇತರೆ ದೇಗುಲಗಳಿಗೆ ತಂದು ಪೂಜೆ ಸಲ್ಲಿಸಿದರು.
ಎಪಿಎಂಸಿ ಗಂಜ್, ಎಪಿಎಂಸಿ ಮಳಿಗೆ, ನವಲಿ, ನೀರ್ಲೂಟಿ ಗ್ರಾಮಗಳ ರಸ್ತೆ , ವಾಲ್ಮೀಕಿ ವೃತ್ತ, ತಾವರಗೇರಾ ರಸ್ತೆ, ರಾಜಬೀದಿಸ ಸೇರಿದಂತೆ ಪಟ್ಟಣದ ಅಂಗಡಿ, ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ಸಡಗರ, ಸಂಭ್ರಮದಿಂದ ನಡೆಯಿತು.
ಮಕ್ಕಳು, ಯುವತಿಯರು, ಮಹಿಳೆಯರು ಹೊಸ ಬಟ್ಟೆ, ಬೆಲೆ ಬಾಳುವ ಬಂಗಾರದ ಆಭರಣ ಧರಿಸಿ ತಮ್ಮ ಅಂಗಡಿಗಳಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮನೆ, ಅಂಗಡಿಗಳಲ್ಲಿ ಎಣ್ಣೆ ದೀಪ, ಅಲಂಕಾರಿಕ ಆಕಾಶಪುಟ್ಟಿಗಳು ಗಮನ ಸೆಳೆಯಿತು. ಲಕ್ಷ್ಮೀ ಪೂಜೆಗೆ ಬಂದ ಅತಿಥಿಗಳಿಗೆ ಅಂಗಡಿಕಾರರು ಉತ್ತುತ್ತಿ, ಕಲ್ಲುಸಕ್ಕರೆ, ಬಾಳೆ ಇತರೆ ಸಿಹಿ ತಿನ್ನಿಸು ನೀಡಿ ಗೌರವಿಸಿದರು.
ಪ್ರತಿ ವರ್ಷದಂತೆ ಈ ಸಲ ಪಟಾಕಿ ಸದ್ದು ಇರಲಿಲ್ಲ, ಅಲ್ಲಲ್ಲಿ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.