ಕೊಪ್ಪಳ: ರಾಜ್ಯದ ಹಲವು ಕಡೆ ತಮ್ಮ ಸಂಘಟನೆಯ ಸದಸ್ಯರ ಮೇಲೆ ದಾಳಿ ನಡೆಸಿದ ತನಿಖಾ ತಂಡಗಳ ಕ್ರಮ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಂಘಟನೆಯ ಸದಸ್ಯರು ಇಲ್ಲಿನ ಅಶೋಕ ವೃತ್ತದಲ್ಲಿ ಪಿಎಫ್ಐ ಸಂಘಟನೆ ಪರ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಿಸಿಬಿ, ಸ್ಥಳೀಯ ಪೊಲೀಸರು, ಎನ್ಐಎ ಹಾಗೂ ಇತರೆ ತನಿಖಾ ತಂಡಗಳ ಅಧಿಕಾರಿಗಳು ‘ನಮ್ಮ ಸಂಘಟನೆ ಸದಸ್ಯರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ. ಕೆ.ಜಿ. ಹಳ್ಳಿ ಘಟನೆ ಬಗ್ಗೆ ತನಿಖಾ ತಂಡಗಳ ಮುಖ್ಯಸ್ಥರೇ ದ್ವಂದ್ವ ನಿಲುವು ಹೊಂದಿದ್ದಾರೆ’ ಎಂದು ಆರೋಪಿಸಿದರು.
ಮಾನವ ಸರಪಳಿ ನಿರ್ಮಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಬಿಜೆಪಿ ಬೆಂಬಲದಿಂದ ಈ ದಾಳಿ ನಡೆದಿದೆ ಎಂದು ಟೀಕಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ರಸೂಲ್, ಮೆಹಬೂಬ್, ಇರ್ಫಾನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.