ಕೊಪ್ಪಳ: ‘ಎಲ್ಲಿಕಾನೂನು ಸುವ್ಯವಸ್ಥೆ ಸರಿಯಾಗಿ ನಡೆದಿದೆಯೋ ಅಲ್ಲಿ ಆಡಳಿತ ವ್ಯವಸ್ಥೆ ಉತ್ತಮವಾಗಿದೆ ಎಂದು ಅರ್ಥ.ಉತ್ತಮ ಆಡಳಿತಕ್ಕೆ ಪೊಲೀಸರ ಶ್ರಮ, ತ್ಯಾಗ, ಸೇವೆ ಕಾರಣ‘ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಾಲಯದ ಆವರಣದಲ್ಲಿ ನಡೆದ ಪೊಲೀಸರ ಹುತಾತ್ಮ ದಿನಾಚರಣೆಯ ಸಮಾರಂಭದಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.
‘ಪೊಲೀಸರಿಗೆ ಕರ್ತವ್ಯವೇ ದೇವರು. ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಅವರಿಗೆ ದೊರೆಯಲಿ. ಅದಕ್ಕೆ ಜಿಲ್ಲಾ ಪಂಚಾಯಿತಿಯಿಂದ ಸಂಪೂರ್ಣ ಸಹಕಾರ ದೊರೆಯಲಿದೆ.ಎಲ್ಲೆಡೆಯೂ ಉತ್ತಮ ಆಡಳಿತ ನಡೆದಿದೆ. ನಾವೆಲ್ಲರೂ ಮನೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆಪೊಲೀಸರ ಹಾಗೂ ಸೈನಿಕರ ಶ್ರಮವಿದೆ. ಅವರ ಹಗಲಿರುಳು ಸೇವೆ ಎಷ್ಟು ಸ್ಮರಿಸಿದರೂ ಸಾಲದು‘ ಎಂದರು.
ಕಳೆದ ವರ್ಷ ದೇಶದಲ್ಲಿ ವಿವಿಧ ವಿಭಾಗದ 377 ಪೊಲೀಸರು ಕರ್ತವ್ಯದ ವೇಳೆ ಹುತಾತ್ಮರಾಗಿದ್ದಾರೆ. ಇನ್ನು ಕರ್ನಾಟಕದಲ್ಲಿ 16 ಪೊಲೀಸರು ಹುತಾತ್ಮರಾಗಿದ್ದರೆ. ಕೊಪ್ಪಳದಲ್ಲಿ ಒಬ್ಬರು ಹುತಾತ್ಮರಾಗಿದ್ದಾರೆ. ಅವರೆ ಲ್ಲರೂ ತಮ್ಮ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಸೇವೆ ನಾವು ಎಂದೂ ಮರೆಯುವಂತಿಲ್ಲ ಎಂದರು.
ಜಾತ್ರೆ, ಚುನಾವಣೆ ಸೇರಿ ಹಲವು ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿರುತ್ತಾರೆ. ಅನೇಕ ಅಡೆತಡೆ ಮಧ್ಯೆ ತಮ್ಮ ಜೀವ ಒತ್ತೆ ಇಟ್ಟು ಕೆಲಸಮಾಡುತ್ತಿರುತ್ತಾರೆ. ನಾವೆಲ್ಲ ಭದ್ರತೆಯಲ್ಲಿ ಹೊರಗಡೆ ಸುತ್ತಾಡುತ್ತಿರುತ್ತೇವೆ. ಆದರೆ ಅವರಿಗೆ ಯಾವ ಭದ್ರತೆಯೂ ಇರುವುದಿಲ್ಲ. ಆ ಮಧ್ಯೆಯೂ ನಮ್ಮ ರಕ್ಷಣೆಗೆ ಅವರು ಹೋರಾಡುತ್ತಾರೆ. ಅಂತವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ,ದೇಶದಲ್ಲಿ ಕಳೆದ ವರ್ಷ ಕರ್ತವ್ಯದ ವೇಳೆ ಹುತಾತ್ಮರಾದ ಎಲ್ಲ ಪೊಲೀಸ್ ಅಧಿಕಾರಿಗಳ ಹೆಸರು ಪ್ರಸ್ತಾಪಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಹುತಾತ್ಮಸ್ಮಾರಕಕ್ಕೆ ವಿವಿಧ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಜಿಲ್ಲೆಯಲ್ಲಿ ಕರ್ತವ್ಯದಲ್ಲಿ ಹುತಾತ್ಮರಾದ ನಾಲ್ವರು ಪೊಲೀಸರ ಕುಟುಂಬಕ್ಕೆ ಪೊಲೀಸ್ ಇಲಾಖೆಸನ್ಮಾನಿಸಿ ಅವರಿಗೆ ಆರ್ಥಿಕ ನೆರವು ನೀಡಲಾಯಿತು.ನಂತರ ಪೊಲೀಸ್ ಪಥ ಸಂಚಲನ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.