ಹನುಮಸಾಗರ: ಇಲ್ಲಿನ ವೆಂಕಟೇಶ್ವರ ಬೆಟ್ಟಕ್ಕೆ ಹೊಂದಿಕೊಂಡಿರುವ ಮನೆಗಳಿಗೆ ಪ್ರತಿ ಮಳೆಗಾಲದಲ್ಲಿ ಬೆಟ್ಟದಿಂದ ಹರಿದು ಬರುವ ನೀರು ಹಾಗೂ ಉರುಳಿ ಬರುವ ಕಲ್ಲುಗುಂಡುಗಳಿಂದ ರಕ್ಷಣೆ ಕಲ್ಪಿಸಿ ಎಂದು ಆ ಭಾಗದಲ್ಲಿ ವಾಸವಿರುವ ಜನರು ಒತ್ತಾಯಿಸಿದ್ದರು.
ಮಂಗಳವಾರ ಮತ್ತು ಬುಧವಾರ ಸುರಿದ ಮಳೆಗೆ ಈ ಭಾಗದಲ್ಲಿರುವ ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದಾಗಿ ಗೋಡೆ ಕುಸಿದು ಹಾನಿ ಸಂಭವಿಸಿತ್ತು. ರಾತ್ರಿಯಿಡಿ ಮನೆಯವರು ಮಳೆಯಲ್ಲಿ ನಿಂತು ಮನೆಗಳಲ್ಲಿ ತುಂಬಿಕೊಂಡಿರುವ ನೀರು ಹೊರಹಾಕಿ ಕಷ್ಟ ಅನುಭವಿಸಿದ್ದರು.
ಸ್ಥಳ ಪರಿಶೀಲಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು, ನೀರು ಹರಿದು ಬರುವ ಭಾಗದ ಬೆಟ್ಟದ ಕೆಳಗಡೆ ಕಾಲುವೆ ತೋಡಿದರು.
ಮನೆಗಳ ಕಡೆಗೆ ಹರಿದು ಬರುವ ನೀರು ನೇರವಾಗಿ ಚರಂಡಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಟ್ಟದಿಂದ ಉರುಳಿ ಬರುವ ಕಲ್ಲುಗಳು ಮನೆಗಳಿಗೆ ತಾಕದೆ ಕಾಲುವೆಯಲ್ಲಿ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ ಹಾಗೂ ಸದಸ್ಯ ರಮೇಶ ಬಡಿಗೇರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.