ಯಲಬುರ್ಗಾ: ಬೇವೂರು ಹೋಬಳಿ ಕೇಂದ್ರ ರಚನೆ, ಹುಣಸಿಹಾಳ ಮತ್ತು ತರಲಕಟ್ಟಿ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ರಚನೆಗೆ ಒತ್ತಾಯಿಸಿ ಕಳೆದ ಎರಡು ವಾರಗಳಿಂದಲೂ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ.
ಭಾನುವಾರ ಧರಣಿಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಮರೇಗೌಡ ಪಾಟೀಲ, ಹಲವು ವರ್ಷಗಳಿಂದಲೂ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ರಚಿಸುವಂತೆ ಹಲವು ಗ್ರಾಮಸ್ಥರು ಒತ್ತಾಯಿಸುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಯು ಇವರ ಒತ್ತಾಯಕ್ಕೆ ಸ್ಪಂದಿಸಿಲ್ಲ, ಅಭಿವೃದ್ಧಿ ಪರಿಕಲ್ಪನೆ ಇಲ್ಲದ ಹಾಗೂ ಸಮಗ್ರ ಗ್ರಾಮೀಣ ವಿಕಾಸಗೊಳಿಸಬೇಕೆಂಬ ಇಚ್ಛಾಶಕ್ತಿ ಇಲ್ಲದ ಜನಪ್ರತಿನಿಧಿಗಳು ಕ್ಷೇತ್ರವನ್ನು ಆಳುತ್ತಿರುವುದರಿಂದ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವಾಸ್ತವದಲ್ಲಿ ಪ್ರಗತಿಕಾಣದೇ ಬರೀ ಬಾಯಿಮಾತಲ್ಲಿ ಮಾತ್ರ ಅಭಿವೃದ್ಧಿಗೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.
ಕುಷ್ಟಗಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜ ನಾಯಕ ಮಾತನಾಡಿದರು.
ಹೋರಾಟ ಸಮಿತಿ ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ, ಮುಖಂಡರಾದ ಶ್ರೀಕಾಂತಗೌಡ ಮಾಲಿಪಾಟೀಲ, ಶರಣಪ್ಪ ರಾಂಪೂರ, ಹನುಮಂತಪ್ಪ ಗುರಿಕಾರ, ಬಸವರಾಜ ಬೋಮ್ಮನಾಳ, ದ್ಯಾಮಣ್ಣ ಪೂಜಾರ, ಹನುಮೇಶ ಕೋನನಗೌಡ್ರ, ಶಿವಶಂಕರಪ್ಪ ಕುರಿ, ಕುಷ್ಟಗಿ ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ, ಸಂಗಪ್ಪ ಗೊಂದಿ, ಮಲ್ಲಪ್ಪ ಭಾವಿಕಟ್ಟಿ, ನಾರಾಯಣ ಜನಾದ್ರಿ, ಬುಡ್ಡಪ್ಪ ಹಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.