ADVERTISEMENT

ಯಲಬುರ್ಗಾ: ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:49 IST
Last Updated 15 ಜನವರಿ 2022, 8:49 IST
ಯಲಬುರ್ಗಾ ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಪಾಲಕರು ಶುಕ್ರವಾರ ವಿರೋಧ ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು
ಯಲಬುರ್ಗಾ ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಪಾಲಕರು ಶುಕ್ರವಾರ ವಿರೋಧ ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು   

ಯಲಬುರ್ಗಾ: ಪಟ್ಟಣದ ಹೊರವಲಯದ ಸಂಗನಾಳ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ ಕೋವಿಡ್ ಸೋಂಕಿತರ ಆರೈಕೆ ಕೇಂದ್ರ ತೆರೆಯುವುದಕ್ಕೆ ಪಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸರ್ಕಾರದ ಆದೇಶದನ್ವಯ ಸ್ಥಳೀಯ ತಾಲ್ಲೂಕು ಆಡಳಿತ ಕೇಂದ್ರ ತೆರೆಯಲು ಮುಂದಾ ಗಿರುವ ಹಿನ್ನೆಲೆಯಲ್ಲಿ ಪಾಲಕರು ಹಾಗೂ ವಿವಿಧ ಸಂಘಟನೆಯ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇರೆ ಕಡೆ ಅವಕಾಶವಿದ್ದರೂ ಮಕ್ಕಳು ಅಭ್ಯಾಸಮಾಡುತ್ತಿದ್ದ ವಸತಿ ಶಾಲೆಯಲ್ಲಿಯೇ ಕೇಂದ್ರವನ್ನು ತೆರೆಯಲು ಮುಂದಾಗಿದ್ದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಿದೆ. ಎರಡು ವರ್ಷಗಳಿಂದ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಹೆಚ್ಚಿನ ಅವಧಿ ಮನೆಯಲ್ಲಿಯೇ ಉಳಿಯುವಂತಾಗಿದೆ. ಮತ್ತೆ ವಸತಿ ಶಾಲೆಯಲ್ಲಿ ಕೇಂದ್ರ ತೆರೆಯುವುದರಿಂದ ಶಾಲೆ ಬಿಡಬೇಕಾಗುತ್ತದೆ. ಬೇರೆ ಶಾಲೆಗೆ ಸ್ಥಳಾಂತರಿಸಿದರೂ ಅಗತ್ಯ ಸೌಲಭ್ಯಗಳ ಕೊರತೆಯಿಂದ ಮಕ್ಕಳು ವಿವಿಧ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸೋಂಕಿತರ ಆರೈಕೆ ಕೇಂದ್ರ ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ADVERTISEMENT

ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಈ ಶಾಲೆಯ 6 ರಿಂದ 9ನೇ ತರಗತಿಯ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಡಳಿತದಿಂದ ಆದೇಶ ಇರುವುದರಿಂದ ಇದೇ ಶಾಲೆಯಲ್ಲಿ ಕೇಂದ್ರವನ್ನು ತೆರೆಯಬೇ ಕಾಗಿರುವುದರಿಂದ ಅನಿವಾರ್ಯವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಕೋವಿಡ್ ನಿಯಂತ್ರಣ ಅಗತ್ಯವಿ ರುವುದರಿಂದಜನರು ಸಹಕರಿಸಬೇಕು. ಸರ್ಕಾರಕ್ಕೆ ಮಕ್ಕಳ ಶೈಕ್ಷಣಿಕ ವ್ಯವಸ್ಥೆಯನ್ನು ಹಾಳುಮಾಡುವ ಉದ್ದೇಶವಿಲ್ಲ. ಸರ್ಕಾರದ ಕಾರ್ಯಕ್ರಮಗಳಿಗೆ ವಿರೋಧಿಸುವಂತಿಲ್ಲ. ಅಗತ್ಯಬಿದ್ದರೆ ಮಕ್ಕಳನ್ನು ಬೇರೆ ಶಾಲೆಯಲ್ಲಿ ಕಲಿಕೆಗೆ ಅನುಕೂಲ ಕಲ್ಪಿಸಲಾಗುವುದು. ಪಾಲಕರು ಪ್ರೋತ್ಸಾಹಿಸಬೇಕು ಎಂದು ಮನವರಿಕೆ ಮಾಡಿದರು.

ಕೇವಲ ಯಲಬುರ್ಗಾ ಶಾಲೆ ಯೊಂದೇ ಆರೈಕೆ ಕೇಂದ್ರವನ್ನಾಗಿ ಮಾಡದೇ ಜಿಲ್ಲೆಯ ಟಣಕನಕಲ್ಲ, ತಳಕಲ್ಲ ಹಾಗೂ ಸಿದ್ದಾಪೂರ ಗ್ರಾಮದ ವಸತಿ ಶಾಲೆಗಳನ್ನು ಉಪಯೋಗಿ ಸಿಕೊಳ್ಳಲಾಗುತ್ತದೆ. ಪಾಲಕರು ಆತಂಕಗೊಳ್ಳುವುದು ಸಹಜವಾಗಿದ್ದರೂ ಕೋವಿಡ್ ನಿಯಂತ್ರಿಸುವುದು ದೊಡ್ಡ ಸವಾಲಾಗಿರು ವುದರಿಂದ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಪ್ರತಿಯೊಬ್ಬರು ಸಹಕರಿಸಬೇಕು
ಎಂದು ಹೇಳಿದರು.

ಹರಸಾಹಸ: ಆರೈಕೆ ಕೇಂದ್ರ ತೆರೆಯುವುದರ ವಿರುದ್ಧ ದಿಢೀರಣೆ ಪ್ರತಿಭಟನೆಗೆ ಮುಂದಾಗಿದ್ದ ಪಾಲಕರನ್ನು ಸಮಾಧಾನ ಪಡಿಸಲು ಅಧಿಕಾರಿಗಳು ಹರಸಾಹಸಪಟ್ಟರು. ಪಿಎಸ್‍ಐ ಶಿವಕುಮಾರ ಮುಗ್ಗಳ್ಳಿ, ಸಿಪಿಐ ನಾಗರೆಡ್ಡಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.