ADVERTISEMENT

ಕೊಪ್ಪಳ: ಜು. 2ರಂದು ಟೋಲ್‌ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 2:55 IST
Last Updated 30 ಜೂನ್ 2022, 2:55 IST

ಕೊಪ್ಪಳ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನ ಮಾಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಮಾದಿಗ ದಂಡೋರ ಸಮಿತಿ ಜು. 2ರಂದು ತಾಲ್ಲೂಕಿನ ಹಿಟ್ನಾಳ್‌ ಟೋಲ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌. ಮೈಲಾರಪ್ಪ ‘ಸದಾಶಿವ ವರದಿ ಕುರಿತು ಬಹಿರಂಗ ಚರ್ಚೆ ನಡೆಯಬೇಕು’ ಎಂದು ಆಗ್ರಹಿಸಿದರು.

‘ಬಿ.ಆರ್‌. ಅಂಬೇಡ್ಕರ್‌ ಅವರು ನಮಗೆ ಮೀಸಲಾತಿ ನೀಡಿದರೂ ಅದು ಸರಿಯಾಗಿ ಹಂಚಿಕೆಯಾಗಿಲ್ಲ. ಪರಿಶಿಷ್ಟ ಜಾತಿಯಲ್ಲಿಯೇ ಬಹುಸಂಖ್ಯಾತರಾದ ಮಾದಿಗರಿಗೆ ಅನ್ಯಾಯವಾಗುತ್ತಿದೆ.ನ್ಯಾ.ಸದಾಶಿವ ಆಯೋಗ ವರದಿ ಬಗ್ಗೆ ಪರಿಶಿಷ್ಟ ಜಾತಿಯವರಲ್ಲಿಯೇ ಅನೇಕ ಪೂರ್ವಗ್ರಹಗಳಿದ್ದು, ಅವುಗಳ ಬಗ್ಗೆ ಮುಕ್ತವಾಗಿ ಎಲ್ಲರಿಗೂ ಗೊತ್ತಾಗಬೇಕು. ಇದಕ್ಕಾಗಿ ಬಹಿರಂಗ ಚರ್ಚೆ ಮಾಡಬೇಕು. ನಮ್ಮ ಸಮಾಜದಿಂದ ಚುನಾವಣೆಯಲ್ಲಿ ಗೆಲುವು ಪ‍ಡೆದ ಜನಪ್ರತಿನಿಧಿಗಳು ಆಯೋಗದ ವರದಿ ಬಗ್ಗೆ ಮೌನಕ್ಕೆ ಜಾರಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಈ ಬೇಡಿಕೆಗಾಗಿ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೆದ್ದಾರಿ ತಡೆ ಮಾಡಲಾಗುವುದು. ಜು. 3ರಂದು ಹೈದರಾಬಾದ್‌ ಚಲೊ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ 200ಕ್ಕೂ ಅಧಿಕ ಮಾದಿಗ ಸಮಾಜದವರು ತೆರಳಲಿದ್ದಾರೆ’ ಎಂದುತಿಳಿಸಿದರು.

ಮಾದಿಗ ದಂಡೋರ ಸಮಿತಿ ಜಿಲ್ಲಾ ಘಟಕದ ಉಪಾಧ್ಯಕ್ಷ ಹುಲಗಪ್ಪ ಹಿರೇಮನಿ, ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಗಾಳೇರ್, ಕಾರ್ಯದರ್ಶಿ ದುರ್ಗಪ್ಪ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.